ಬುಧವಾರ, ಡಿಸೆಂಬರ್ 18, 2013

ಕಾರಣ ಯಾರಿಗೆ ಗೊತ್ತು?

ಮದುವೆಯ ಹೆಣ್ಣು; ನಾಳೆಯೆ ಮದುವೆ; ಇವಳೇಕೆ
ಮೂಲೆಯ ಹಿಡಿದು ಮಲಗಿಹಳು?
ಬಿಳಿವಲ್ಲಿ ಬೆನ್ನ ಹತ್ತಿರವಿಹುದು; ಹೂದಂಡೆ
ಹೆರಳಲ್ಲಿ; ಮಾತಿಲ್ಲ; ಉಸಿರು.

ಥಳಥಳಿಸುವ ಕಣ್ಣ ಮುಚ್ಚಿ, ಕೆದರಿದ ಕುರುಳ
ಹತ್ತಾರು ದಿಕ್ಕಿಗೆ ಹರಿಸಿ,
ಹೊದಿಕೆಯ ಹೊರಗೆ ಮುಂಗೈ ಬೀಸಿ, ನಡುಬೆರಳ
ಉಂಗುರುವ ನಡುಹರಳ ಜ್ವಲಿಸಿ,

ಬೆನ್ನ ಸೆರಗಿನ ಮೇಲೆ ಅರಿಯದೆ ತಂಗಿದ
ಜರತಾರಿ ಹೂವನು ಮರೆತು,
ತಲೆಯಿಟ್ಟ ತುಂಬುದಿಂಬಿನ ಮೇಲೆ ಹಣೆಗಿಟ್ಟ
ಕುಂಕುಮದ ಒತ್ತನು ಕುರಿತು,

ಏನೇನೊ ಮಾತು-ದೇವರು ಬಲ್ಲ!-ಮಾತೆಲ್ಲ
ಹೊಂದದೆ ಒಡೆದ ಕಿರುಮುತ್ತು;
ಮನಸಿನ ಮೇಲುಮಾಳಿಗೆಯಲ್ಲಿ ಬೆಳಕಿಲ್ಲ.
ಕಾರಣ ಯಾರಿಗೆ ಗೊತ್ತು?

                                - ಕೆ. ಎಸ್. ನರಸಿಂಹಸ್ವಾಮಿ
                                                                                     ' ಇರುವಂತಿಗೆ '

ಕಾಮೆಂಟ್‌ಗಳಿಲ್ಲ: