ಸೋಮವಾರ, ಡಿಸೆಂಬರ್ 16, 2013

ಗೆಳೆಯರು 


ಗೆಳೆಯರಿರಲಿ ಈ ಬಾಳಿನಲಿ
 ಗೆಳೆಯರಿರಲಿ ಕೊನೆ ತನಕ
ಹಗುರ ಹೃದಯ, ತಿಳಿ ಮನಸಿರಲಿ
ತೊರೆದು ಎಲ್ಲ ತವಕ

ದುಗುಡ ಮಡುವಾದ ಮೋಡವ ತಡೆದು
ಕಂಬನಿಗರೆಸುವ ಬೆಟ್ಟಗಳು
ಮನಸಿಗೆ ಮೆತ್ತಿದ ಕೊಳೆಯನು ತೊಳೆಯಲು
ನಿರ್ಮಲ ಸ್ನಾನಘಟ್ಟಗಳು

ಹರಿವ ನೀರು ಹೊಲಗದ್ದೆಗೆ ಸೇರಲು
ಹಳ್ಳ ನಾಲೆ ಕೆರೆ ಕೊಳ್ಳಗಳು
ಬೆಳೆದ ದವಸವನು ಕೇರುವ ಮೊರಗಳು
ಕಾಳನು ಅಳೆಯುವ ಬಳ್ಳಗಳು

ಶ್ರಮದ ಸಾಧನೆಗೆ ಬೆನ್ನ ಚಪ್ಪರಿಸಲು
ತೊಡಿಸಲು ಹಿಗ್ಗಿನ ಮಾಲೆ
ಬೀಗಿ ಉಬ್ಬಿದರೆ ಚುಚ್ಚಿ ಎಚ್ಚರಿಸಲು
ಬಿದ್ದರೆ ಎತ್ತಲು ಮೇಲೆ

                                   - ಬಿ. ಆರ್. ಲಕ್ಷ್ಮಣರಾವ್