ಮಂಗಳವಾರ, ಡಿಸೆಂಬರ್ 31, 2013

ಹೊಸವರ್ಷ ಬಂದಂತೆ ಯಾರು ಬಂದಾರು?

ಹೊಸವರ್ಷ ಬಂದಂತೆ ಯಾರು ಬಂದಾರು
ಗಿಡಮರಕೆ ಹೊಸವಸ್ತ್ರ ಯಾರು ತಂದಾರು
ಹಾಡೆಂದು ಕೋಗಿಲೆಯ ಕೂಗಿ ಕರೆದಾರು
ಮಾವಿನಾ ಚಿಗುರನ್ನು ತಿನಲು ಕೊಟ್ಟಾರು?

ಏನೋ ನಿರೀಕ್ಷೆ ಸೃಷ್ಟಿಯಲ್ಲೆಲ್ಲ
ಹೂಗಳ ಪರೀಕ್ಷೆ ದುಂಬಿಗಳಿಗೆಲ್ಲ
ಬಂದನೊ ವಸಂತ ಬಂದಿಗಳೇ ಎಲ್ಲ!
ಹೊಸ ಬಯಕೆ, ಹೊಸ ಅಲೆ ರುಚಿರುಚಿಯ ಬೆಲ್ಲ!

ಏನಿದೆಯೋ ಇಲ್ಲವೋ ಆಸೆಯೊಂದುಂಟು
ಬಾನಿನಲಿ ಹೊಸ ಸೂರ್ಯ ಬರುವ ಮಾತುಂಟು
ಸಂಜೆಯಲಿ ಮಿಂಚಿದರೆ ಅಂಚುಗಳ ಬಣ್ಣ,
ಕಪ್ಪಾದರೂ ಮುಗಿಲು ಜರಿ ಸೀರೆಯಣ್ಣ

ನೆನಪುಗಳ ಜೋಲಿಯಲಿ ತೂಗುವುದು ಮನಸು
ಕಟ್ಟುವುದು ಮಾಲೆಯಲಿ ಹೊಸ ಹೊಸಾ ಕನಸು
ನನಸಾಗದಿದ್ದರೂ ಕನಸಿಗಿದೆ ಘನತೆ
ತೈಲ ಯಾವುದೆ ಇರಲಿ ಉರಿಯುವುದು ಹಣತೆ

                                                         - ಡಾII ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ
ಹೊಸ ವರ್ಷದ ಹಾಡು

ಇಂದು ನಡುರಾತ್ರಿ
ಗಡಿಯಾರ ತನ್ನೆರಡು ಕೈಗಳ
ಜೋಡಿಸಿ ನಮಗೆs ನಿಮಗೆs
ವಂದನೆ ಸಲಿಸಿದ ಗಳಿಗೆ
ಅಭಿನಂದನೆ ತಿಳಿಸಿದ ಗಳಿಗೆ
ಬರಲಿದೆ ಹೊಸ ವರ್ಷ ಈ ಇಳೆಗೆ.
ಚಪ್ಪಾಳೆ ತಟ್ಟಿ, ಪಟಾಕಿ ಹಚ್ಚಿ,
ಆರತಿ ಬೆಳಗಿ, ಸ್ವಾಗತ ಮೊಳಗಿ,
ಹರಡಲಿ ದೆಸೆದೆಸೆಗೆ,
ಹರ್ಷದ ಈ ಒಸಗೆ
ಬರಲಿದೆ ಹೊಸ ವರ್ಷ ನಮ್ಮ ಬಳಿಗೆ.

Happy New year!
ತರಲಿ ನಮಗೆ ಹೊಸ ಆಸೆ ಭರವಸೆಯ
ಸೌಖ್ಯದ ಕ್ಯಾಲೆಂಡರ್,
ಭಾವೈಕ್ಯದ ಕ್ಯಾಲೆಂಡರ್

ತುಂಬಿಸಿ ಗಾಜಿನ ಬಟ್ಟಲಿಗೆ
ವ್ಹಿಸ್ಕಿ, ರಮ್ಮು, ಬೀರು
ಅಥವಾ ಶಾವಿಗೆ ಖೀರು,
ಅಥವಾ ಮೆಣಸಿನ ಸಾರು,
ಅಥವಾ ನಿಮ್ಮ ಕಣ್ಣೀರು
ತಾಕಿಸಿ ಬಟ್ಟಲ ಬಟ್ಟಲಿಗೆ-Cheers!
ಸೋಕಿಸಿ ತುಟಿಗಳಿಗೆ,
ಅಂಜದೆ ಬೆಲೆಗಳಿಗೆ,
ಬರಲಿದೆ ಹೊಸ ವರ್ಷ ಈ ಇಳೆಗೆ
ನಮ್ಮ ಬಳಿಗೆ.

Happy New year!
ತರಲಿ ನಮಗೆ ಹೊಸ ಆಸೆ ಭರವಸೆಯ
ಸೌಖ್ಯದ ಕ್ಯಾಲೆಂಡರ್,
ಭಾವೈಕ್ಯದ ಕ್ಯಾಲೆಂಡರ್

ಯಾರಿವನೀ ಭೂಪ?
ಏನಿವನ ಪ್ರತಾಪ?
ಕಾಲನs ಬೇತಾಳನs
ಎಲ್ಲ ಸಮಸ್ಯೆಗೂ ಉತ್ತರಿಸಬಲ್ಲ
ವಿಕ್ರಮನಿವನಲ್ಲ.
ವಾಮನs ಈ ವಾಮನs
ಮೂರೇ ಹೆಜ್ಜೆಗೆ ಮೂಜಗ ಅಳೆವ
ತ್ರಿವಿಕ್ರಮ ತಾನಲ್ಲ.
ಇಲ್ಲ ಇವನಲ್ಲಿ, ಪಾಪ!
ಅಲ್ಲಾದೀನನ ಮಾಯಾದೀಪ,
ನಮ್ಮಂತೆಯೇ ಹುಂಬ,
ಇವ ನಮ್ಮೆಲ್ಲರ ಪ್ರತಿಬಿಂಬ,
ಏನು ಮಾಡುವನೊ, ಏನು ನೀಡುವನೊ,
ಕಾದು ನೋಡೋಣ ಕೊಂಚ,
ಆತುರ ತರವಲ್ಲ,
ಛೇಡಿಸುವುದು ಸಲ್ಲ.

Happy New year!
ತರಲಿ ನಮಗೆ ಹೊಸ ಆಸೆ ಭರವಸೆಯ
ಸೌಖ್ಯದ ಕ್ಯಾಲೆಂಡರ್,
ಭಾವೈಕ್ಯದ ಕ್ಯಾಲೆಂಡರ್

                               - ಬಿ. ಆರ್. ಲಕ್ಷ್ಮಣರಾವ್

ಸೋಮವಾರ, ಡಿಸೆಂಬರ್ 30, 2013

ಮದ್ದಲೆ ದನಿಗೆ ಎದ್ದು ಕುಣಿವ ಕವಿತೆಗಳು!



        'ಕಾಡು ಕುದರಿ ಓಡಿ ಬಂದಿತ್ತ' ಎಂಬ ಹಾಡನ್ನು ನಾನು ಕೇಳಿದ್ದೆನಾದರೂ ಅದೊಂದು ಜಾನಪದಗೀತೆ ಎಂದೇ ತಿಳಿದಿದ್ದೆ. ನಾಟಕಕಾರ, ಕಾದಂಬರಿಕಾರರಾಗಿ ನನಗೆ ಗೊತ್ತಿದ್ದ ಡಾ. ಚಂದ್ರಶೇಖರ ಕಂಬಾರರು ಕವಿಯೂ ಹೌದು ಎಂದು ನನಗೆ ತಿಳಿದದ್ದು ತಡವಾಗಿ! ಎಂಥ ಅದ್ಭುತ ಕವಿ!

         ಕಂಬಾರರ ಕಾವ್ಯಶೈಲಿಗೆ ಮನಸೋತು ನಾನೀಗಾಗಲೆ ಅವರ ಅಭಿಮಾನಿಯಾಗಿಬಿಟ್ಟಿದ್ದೇನೆ. ಉತ್ತರ ಕನ್ನಡದ ದೇಸಿ ಕನ್ನಡ ಸೊಗಡಿನ ಅವರ ಕವಿತೆಗಳ ಪ್ರತಿ ಪದವೂ ಅತ್ಯಂತ ನಿರಾಯಾಸವಾಗಿ, ಸಹಜವಾಗಿ ಜೋಡಿಸಿದಂತಿವೆ. ಅವರ ಕೆಲವು ಕವಿತೆಗಳನ್ನು ಓದುವಾಗ ನನಗೆ, ಮದ್ದಲೆ ದನಿ ಕೇಳಿ ಅವು ಎದ್ದು ಕುಣಿಯುತ್ತಿವೆಯೇನೋ ಎಂಬ ಭಾವವುಂಟಾಯಿತು. ಅಂಥ ಲಯಬದ್ಧತೆ, ಹುಮ್ಮಸ್ಸು ಅವರ ಕವಿತೆಗಳಲ್ಲಿವೆ. ಅಲ್ಲಲ್ಲಿ ಗದ್ಯದ ರೀತಿ ಕಂಡರೂ, ಸತ್ವಶಾಲಿಯಾದ ವಸ್ತು ನಮ್ಮನ್ನು ಹಿಡಿದಿಡುತ್ತದೆ.

         ಅವರ 'ಕಾಡುಕುದುರೆ'ಯಂತೂ ಹುಚ್ಚೆದ್ದ ಕುದುರೆಯೊಂದನ್ನು ಕಣ್ಮುಂದೆ ತಂದು ನಿಲ್ಲಿಸುತ್ತದೆ. 'ರೆಕ್ಕೆಯ ಹುಳು' ಭ್ರಮೆಯಿಂದ ವಾಸ್ತವಕ್ಕಿಳಿಸಿದರೆ, ಇನ್ನು ’ಆ ಮರ ಈ ಮರ’ವು ಪ್ರತಿ ಓದಿನಲ್ಲೂ ಹೊಸ ಒಳಾರ್ಥದಿಂದ ಸೋಜಿಗಗೊಳಿಸಿ ನನ್ನ ನೆಚ್ಚಿನ ಕವಿತೆಯಾಗಿಬಿಟ್ಟಿದೆ.

        ಇಷ್ಟೆಲ್ಲಾ ಹೇಳಿ, ಕುತೂಹಲ ಮೂಡಿಸಿ ನಿಮ್ಮನ್ನು ಸುಮ್ಮನೆ ಬಿಟ್ಟರಾದೀತೆ? :)
        ಇಗೊ, ಇಲ್ಲಿವೆ ಅವರ ಕೆಲವು ಕವಿತೆಗಳು, ನಿಮ್ಮ ಓದಿಗಾಗಿ.. ಓದಿ, ಪ್ರತಿಕ್ರಿಯಿಸಿ..

ಅಕ್ಕರೆಯಿಂದ,
ಕನಸು..
ಆ ಮರ ಈ ಮರ

ನದಿಯ ದಂಡೆಯಲ್ಲೊಂದು ಮರ
ನದಿಯಲ್ಲಿ ಒಂದು ಮರ.

ಮೇಲೆ ನಿಜವಾದ ಮರ
ಕೆಳಗೆ ಬಿಂಬಿಸಿದ ಮರ.

ಮ್ಯಾಲಿನ ಮರದಲ್ಲಿ ಚಿಲಿಪಿಲಿ ಪ್ರಪಂಚ
ಗೀತಂಗಳ ಕುಕಿಲುತಾ
ರೆಕ್ಕೆಯಂಚುಗಳಿಂದ ಎಲೆಗಳ ಮ್ಯಾಲೆ
ಕನಸುಗಳ ಗೀಚುತಾ ಇದ್ದರೆ -
ಕೆಳಗೆ ಬೇರುಗಳಲ್ಲಿ
ಚಿಳಿಮಿಳಿ ಮೀನು ಆಳಸುಳಿಯುತಾ
ನೆರಳುಬೆಳಕಿನ ಬಲೆಯಲೀಜುತಾ
ನೆನಪುಗಳ ಕೆರಳಿಸುತಾವೆ.

ತೆರೆ ಎದ್ದಾಗ 
ಒಂದು ನಡುಗುತ್ತದೆ
ಇನ್ನೊಂದು ನಗುತ್ತದೆ.

ಆದರೂ ನೆಪ್ಪಿರಲಿ
ತುದಿಗಳು ಎರಡಾದರೂ
ಬೇರು ಒಂದೇ ಈ ಮರಗಳಿಗೆ.

ನೀನೊಂದು ಮರ ಹತ್ತಿದರೆ
ಇನ್ನೊಂದರಲ್ಲಿ ಇಳಿಯುತ್ತಿ
ತಲೆ ಮೇಲಾಗಿ ಹತ್ತುತ್ತೀಯ
ತಲೆ ಕೆಳಗಾಗಿ ಇಳಿಯುತ್ತೀಯ

ಮ್ಯಾಲೆ ನೀಲಿಯ ಬಯಲು
ಕೆಳಗದರ ನಕಲು
ಎರಡು ಬಯಲುಗಳಲ್ಲು ಒಂದೆ ಮೌನ

ಹತ್ತುತ್ತ ಹತ್ತುತ್ತ ಗಾಳಿಯಾಗುತ್ತಿ ಅಂತ ತಿಳಿ.
ಆದರೂ ನೆಪ್ಪಿರಲಿ ಕೆಳಕ್ಕಿಳಿವ ಕರ್ಮ ತಪ್ಪಿದ್ದಲ್ಲ.
ಹತ್ತೋದು ನಿನ್ನ ಕೈಲಿದ್ದರೂ
ಇಳಿಯೋದು ನಿನ್ನ ಕೈ ಮೀರಿದ್ದು.

ಹತ್ತಿದವರು ಸ್ವರ್ಗ ಸೇರುವರೆಂದು ಸುದ್ದಿ
ನಮಗದು ಖಾತ್ರಿಯಿಲ್ಲ.
ಮುಳುಗಿದವರಿಗೆ ಪಾತಾಳ ಖಚಿತ
ಬೇಕಾದಾಗ ಖಾತ್ರಿ ಮಾಡಿಕೋಬಹುದು.

ಈ ಕಥೆಯ ದುರಂತ ದೋಷ ಯಾವುದೆಂದರೆ:
ನಿಜವಾದ ಮರ ಮತ್ತು
ನೀರಿನ ಮರ
ಇವೆರಡೂ ಒಂದಾದ ಸ್ಥಳ
ಮಾಯವಾಗಿರೋದು.

ಅದಕ್ಕೇ ಹೇಳುತ್ತೇನೆ ಗೆಳೆಯಾ -
ಮ್ಯಾಲೆ ಹತ್ತಿದರೂ
ತಲೆ ಕೆಳಗಾಗಿ ನೇತಾಡುವುದು ತಪ್ಪಿದ್ದಲ್ಲ,
ಮ್ಯಾಲಿಂದ ಜಿಗಿದು
ತಳಮುಟ್ಟಿ
ಮಾಯವಾದ ನೆಲವ
ಹುಡುಕಬೇಕೋ ಹುಡುಕಿ ಬದುಕಬೇಕು.

                                         - ಡಾ. ಚಂದ್ರಶೇಖರ ಕಂಬಾರ
ನನ್ನ ಪಾತ್ರ

ನೋಡು ನೋಡುತ್ತಿದ್ದಂತೆ
ನನ್ನ ನಾಟಕದ ಆ ಪಾತ್ರ
ರಂಗದಿಂದಿಳಿದು ನೇರ ಬಳಿಗೇ ಬಂದ.
ಪಕ್ಕದ ಕುರ್ಚಿಯಲ್ಲಿ ಕೂತ.

ನಾನು ನಾಟಕ ನೋಡುತ್ತಿದ್ದರೆ
ಇವನು ನನ್ನ ಕಡೆ
ತನ್ನ ಕಣ್ಣು ಶಲಾಖೆಯೆಂಬಂತೆ
ಕಣ್ಣಿಂದ ನನ್ನೆದೆಯಲ್ಲಿ ತೂತು ಕೊರೆಯುತ್ತ ಕೂತ.

ತಗಲದ ಹಾಗೆ ಕಾಲು ಸರಿಸಿದರೆ ನಾನು
ಮುದ್ದಾಂ ಕಾಲು ತಗುಲಿಸಿ ಕೂತ.
ಭುಜ ಮುರಿಯುವಂತೆ ಕೈ ಹೇರಿದ.

ಎಲ್ಲರೂ ಸುಮ್ಮನಿದ್ದರೆ ಈತ ಖೊಕ್ಕೆಂದು ನಕ್ಕ.
ಅನಗತ್ಯ ಚಪ್ಪಾಳೆ ತಟ್ಟಿ ಸಿಳ್ಳೆ ಹಾಕಿದ.
ಈಗ ಎಲ್ಲರ ಕಣ್ಣು ಇವನ ಮೇಲೆ.
ಇವನ ಕಣ್ಣು ನನ್ನ ಮೇಲೆ.

ಇದ್ಯಾಕೋ ಸರಿಹೋಗಲಿಲ್ಲಂತ
ನಾಟಕ ಬಿಟ್ಟು ಮನೆಗೆ ಹೊರಟೆ.
ಬೆನ್ನು ಹತ್ತಿ ಬಂದ.

ಬಾಗಿಲು ತೆರೆದರೆ
ನನಗಿಂತ ಮೊದಲೇ ಒಳಹೊಕ್ಕ.

ಥರಾವರಿ ದೇಶಾವರಿ ನಗೆ ನಗುತ್ತ
ಕನ್ನಡಿಯಾಗಿ ಎದುರಿಗೇ ನಿಂತ!

ಎಷ್ಟೊಂದು ಸೌಜನ್ಯ ಕಲಿಸಿ ಕಳಿಸಿದ
ನನ್ನ ಪಾತ್ರಗಳು
ಹಿಂಗ್ಯಾಕೆ ಮಾಡುತ್ತವೆ?

                                      - ಡಾ. ಚಂದ್ರಶೇಖರ ಕಂಬಾರ
ಇಟ್ಟಿಗೆಯ ಪಟ್ಟಣ

ಹಸಿರನ್ನಲ್ಲ,
ಈ ಸಿಟಿಯಲ್ಲಿ ಬಿತ್ತಿ ಬೆಳೆಯುತ್ತಾರೆ
ಮಣ್ಣಿನಿಟ್ಟಿಗೆಯನ್ನ.
ಇಟ್ಟಿಗೆ ಬೆಳೆಯುತ್ತದೆ,
ಕಟ್ಟಡವಾಗುತ್ತದೆ.
ಕಟ್ಟಡ ಆಕಾಶದವಕಾಶವನ್ನ
ಚುಚ್ಚಿ ಬಿಸಿ ಮಾಡುತ್ತದೆ.
ಸೂರ್ಯನ ಬಿಸಿಲಿಗೆ ದೀಪದ ಬೆಳಕಿಗೆ
ಕಿಸಕ್ಕಂತ ಹಲ್ಲು ಕಿರಿದು ಹಳದಿ ನಗುತ್ತದೆ.

ಕಟ್ಟಡದ ಇಕ್ಕಟ್ಟು ಸಡಿಲಿ, ಬಿರುಕಿನಲ್ಲಿ
ಹಸಿರು ಇಣುಕಿದರೆ
ಇಟ್ಟಿಗೆ ಅದರ ಕತ್ತು ಹಿಸುಕಿ ಕೊಲ್ಲುತ್ತದೆ.
ಪಾಪಾತ್ಮ ಹಸಿರು ಹುತಾತ್ಮನಾಗದೆ
ಸಾಯುತ್ತದೆ.

ಗೊತ್ತೆ ನಿಮಗೆ? - ಈ ಸಿಟಿಯೊಳಗೆ
ಆತ್ಮದ ಮಾರ್ಕೆಟ್ಟಿದೆ.
ತಲೆಯ ಕೊಯ್ದು, ತೊಗಲ ಸುಲಿದು
ತಿಪ್ಪರಲಾಗ ತೂಗು ಹಾಕಿದರೆ ತಗೊ, ಹಲೊ
ಕಾಸಿಗೊಂದು ಕಿಲೊ ಕೊಸರಿಗೊಂದು ಕಿಲೊ.
ತಲೆ ತಿಂಬವರಿಗೆ ಸೂಚನೆ:
ಅದು ಹಲ್ಕಿರಿದು ಅಣಕಿಸಿದರೆ
ಹೆದರಬೇಡಿರಿ.

                                  - ಡಾ. ಚಂದ್ರಶೇಖರ ಕಂಬಾರ
ತಕರಾರಿನವರು 

ತಕರಾರಿನವರು ಸ್ವಾಮೀ
ನಾವು ತಕರಾರಿನವರು

ಇಬ್ಬರ ತಕರಾರಿಗೆ ಹುಟ್ಟಿ
ಹಲವರ ತಕರಾರಿನಲ್ಲಿ
ಬೆಳೆದವರು.

ನಾವು ನಿಮ್ಮಂತೆ, ಹೋಗಲಿ
ಯಾರಂತಾದರೂ ಯಾಕಿಲ್ಲವೆಂದು
ಹಡೆದವರನಂದವರು.

ತಕರಾರನುಟ್ಟು ತಕರಾರ ತೊಟ್ಟು
ಮಸಡಿಗೆ ತೆರೆಗಣ್ಣು, ಕಿಸಬಾಯಿ
ಜೋಡಿಸಿ ನಕ್ಕು,
ಪುರಾಣದ ಹರಾಮತನದ
ಮನುವಿನ ಕಟ್ಟಡದ ಮೈಸಿರಿಗೆ
ಬೆದರಾಗಿ ನಿಂತು
ನಿಮ್ಮ ದೃಷ್ಟಿಗೂ
ತಕರಾರು ತೆಗೆದವರು
ಸ್ವಾಮೀ,
ನಾವು ತಕರಾರಿನವರು.

                                  - ಡಾ. ಚಂದ್ರಶೇಖರ ಕಂಬಾರ
ನೀನು-ನಾನು

ಆಣೆಯಲಿ ಮಾತಾಡಿ ಭರವಸೆಯನುಸಿರಾಡಿ
ತೆಕ್ಕೆಗೆಟುಕದ ತೆರೆಯ ನೆರಳು ನೀನು;
ನಂಬಿರುವ ಬರಿ ತೋಳ ಹುಂಬ ನಾನು.
ಗೀಸಿ ಅಗಲಿಸಿದ ತುಟಿ, ಅದರೊಳಚ್ಚೇರು ಬೆಳ-
ದಿಂಗಳನು ಸುರಿವ ಹುಸಿನಗೆಯು ನೀನು;
ಎರಡು ಕಣ್ಣುಳ್ಳ ಬಿಕನೇಸಿ ನಾನು.
ಮಲೆನಾಡ ಸಿರಿಮೈಗೆ ಹಸಿರೊರಸಿ, ಹೂ ಮೆತ್ತಿ
ಮುದ್ದಿಡುವ ಮನ್ಸೂನ ಮಳೆಯು ನೀನು;
ಬೆಳೆವಲದ ಉಸುಬಿನ ಮಸಾರಿ ನಾನು.
ಬ್ರಹ್ಮ ಮಗುವಿದ್ದಾಗ ಥೇಟು ಹೆಣ್ಣಿನ ಹಾಗೆ
ಪಾಟಿಯಲಿ ಬರೆದ ಹುಸಿ ಚಿತ್ರ ನೀನು;
ಅಂಕಲಿಪಿ ಓದಿರುವ ಜ್ಞಾನಿ ನಾನು.
ಇದ್ದಿಲ್ಲ, ಈಗಿಲ್ಲ, ಹಗಲೆಲ್ಲ ವರ್ಣಿಸಿದ
ಹಳೆಯ ಕಾವ್ಯಗಳ ಕವಿ ಸಮಯ ನೀನು;
ಏನೆ ಆದರು ಹೌದು ರಸಿಕ ನಾನು.
ಈಗಿದ್ದ ನದಿ ಮತ್ತೆ ಇನ್ನೊಂದು ಕ್ಷಣಕುಂಟೆ?
ಓ ಅದರ ಜೀವಂತ ವ್ಯಾಖ್ಯೆ ನೀನು;
ಅದ ಬರೆದ ಇಷ್ಟಗಲ ಹಾಳೆ ನಾನು.
ತುಟಿ ನೀಡಿ, ಮೈಸವರಿ, ನವಿರು ನವಿರಿಗೆ ಹೊಸದು,
ಮಾತಾಡಿ, ಮಟಾಮಾಯ-ಕನಸು ನೀನು;
ತುಟಿನೆಕ್ಕಿ ತುರುಸುತಿಹ ಪ್ರಾಯ ನಾನು.
ನೀ ಯಾರೊ, ಎಂತೊ, ಹೆಸರೇನೊ, ಸರಿ ಇತ್ತೀಚೆ
ನಾನೂನು ಅರಿತೆ; ಮೃತ ಸ್ಮರಣೆ ನೀನು;
ಅದ ಹುಗಿದು ಕಟ್ಟಿರುವ ಗೋರಿ ನಾನು.

                                           - ಡಾ. ಚಂದ್ರಶೇಖರ ಕಂಬಾರ
ಅಕ್ಕಕ್ಕು ಹಾಡುಗಳೇ

ಅಕ್ಕಕ್ಕು ಹಾಡುಗಳೇ
ಹಾಡಿನI ಅಚ್ಚಚ್ಚ ಕನಸುಗಳೇ IIಪII
ಬನ್ನಿರಿ ಇನ್ನಿಲ್ಲಿಗೆ IIಪII

ಬರಗಾಲ ಬಂತೆಂದು ಬರವೇನೊ ಹಾಡಿಗೆ
ಮನಸಿನ ನಿನ್ನ ಕನಸಿಗೆI
ಹರಿಯುವ ಹಾಡನ್ನ ಕತ್ತಲ್ಲಿ ಅಮುಕದೆ
ಬಿಡಬೇಕೋ ತಮ್ಮಾ ಬಯಲಿಗೆI
ಆಕಾಶದಲಿ ಕೊನೆ ನಕ್ಷತ್ರ ಇರುವನಕ
ಕನಸು ಇರತಾವಂತ ಹಾಡಬೇಕೋII

ಕ್ಷಿತಿಜದ ಕಣ್ಣಲ್ಲಿ ಬೆಳಕು ಹೊಳೆಯೋ ಹಾಂಗ
ಹಾಡಬೇಕೋ ತಮ್ಮಾ ಹಾಡಬೇಕುI
ಕಲ್ಲಿನ ಎದೆಯಲ್ಲಿ ಜೀವಜಲ ಚಿಲ್ಲೆಂದು
ಚಿಮ್ಮುವಂಥಾ ಹಾಡ ಹಾಡಬೇಕುI
ಆಕಾಶದಂಗಳ ಬೆಳದಿಂಗಳೂ ಕೂಡಾ
ಕಂಗಾಲಾಗುವ ಹಾಡು ಹಾಡಬೇಕೊII

ತಂಗಾಳಿ ಪರಿಮಳಿಸಿ ತವಕಗೊಳ್ಳುವ ಹಾಂಗ
ಹಾಡಬೇಕೋ ತಮ್ಮಾ ಹಾಡಬೇಕೊI
ಚಿಗುರುವಾಸೆಯ ಬಿಟ್ಟ ಹಸಿರು ಕೆರಳುವ ಹಾಂಗ
ಹಾಡಬೇಕೋ ತಮ್ಮಾ ಹಾಡಬೇಕೊI
ನಾದಮಯ ಶಬ್ದದಲಿ ಹೂಬಿಡುವ ಕನಸುಗಳ
ಹಾಡಬೇಕೋ ತಮ್ಮಾ ಹಾಡಬೇಕೊII

                                     - ಡಾ. ಚಂದ್ರಶೇಖರ ಕಂಬಾರ
ಕಾಡುಕುದುರೆ

ಕಾಡುಕುದರಿ ಓಡಿ ಬಂದಿತ್ತII

ಊರಿನಾಚೆ ಊರ ದಾರಿ
ಸುರುವಾಗೊ ಜಾಗದಲ್ಲಿI
ಮೂಡಬೆಟ್ಟ ಸೂರ್ಯಹುಟ್ಟಿ
ಹಸರಿನ ಗುಟ್ಟ ಒಡೆವಲ್ಲಿI
ಮುಗಿವೇ ಇಲ್ಲದI
ಮುಗಿಲಿನಿಂದI
ಜಾರಿಬಿದ್ದ ಉಲ್ಕೀ ಹಾಂಗI
ಕಾಡಿನಿಂದ ಚಂಗನೆ ನೆಗೆದಿತ್ತII

ಮೈಯಬೆಂಕಿ ಮಿರಗತಿತ್ತ
ಬ್ಯಾಸ್ಗಿ ಬಿಸಿಲ ಉಸಿರಾಡಿತ್ತI
ಹೊತ್ತಿ ಉರಿಯೋ ಕೇಶರಾಶಿ
ಕತ್ತಿನಾಗ ಕುಣೀತಿತ್ತI
ಧೂಮಕೇತುI
ಹಿಂಬಾಲಿತ್ತI
ಹೌಹಾರಿತ್ತ ಹರಿದಾಡಿತ್ತI
ಹೈಹೈ ಅಂತ ಹಾರಿ ಬಂದಿತ್ತII

ಕಣ್ಣಿನಾಗ ಸಣ್ಣ ಖದ್ಗ
ಆಸುಪಾಸು ಝಳಪಿಸಿತ್ತI
ಬೆನ್ನ ಹುರಿ ಬಿಗಿದಿತ್ತಣ್ಣ
ಸೊಂಟದ ಬುಗುರಿ ತಿರಗತಿತ್ತI
ಬಿಗಿದ ಕಾಡI
ಬಿಲ್ಲಿನಿಂದI
ಬಿಟ್ಟ ಬಾಣಧಾಂಗ ಚಿಮ್ಮಿI
ಹದ್ದ ಮೀರಿ ಹಾರಿ ಬಂದಿತ್ತII

ನೆಲ ಒದ್ದು ಗುದ್ದ ತೋಡಿ
ಗುದ್ದಿನ ಬದ್ದಿ ಒದ್ದಿಯಾಗಿI
ಒರತಿ ನೀರು ಭರ್ತಿಯಾಗಿ
ಹರಿಯೋಹಾಂಗ ಹೆಜ್ಜೀ ಹಾಕಿI
ಹತ್ತಿದವರI
ಎತ್ತಿಕೊಂಡುI
ಏಳಕೊಳ್ಳ ತಿಳ್ಳೀ ಆಡಿI
ಕಳ್ಳೆಮಳ್ಳೆ ಆಡಿಸಿ ಕೆಡವಿತ್ತII

                                       - ಡಾ. ಚಂದ್ರಶೇಖರ ಕಂಬಾರ 
ರೆಕ್ಕೆಯ ಹುಳು

ರೆಕ್ಕೆಯ ಹುಳುವೊಂದು ಗಕ್ಕನೆ ನಿಂತಿತು
ಎದುರಿಗೊಂದು ಸೊಡರ
ಕಂಡಿತುI ಬಂಗಾರದ ಸದರI
ಉರಿಧಾಂಗI ಸುಖಗಳ ತುದಿಶಿಖರII
ದಳದಳ ಅರಳಿದೆ ಬೆಂಕಿಯ ಹೂವಾ
ತಿರುಗಲಿಲ್ಲ ನದರಾ
ಹಾರಿತುI ಹುಳುವಿನ ಮೈಖಬರಾII

ಏನ ಮಾದಕಾ ಬೆಳಕಿನೀ ಸುಖ
ಕೆರಳತಾವ ಕನಸ
ಕುದ್ದಾವI ಹುಳುವಿನ ಮೈಮನಸI
ಹೆಂಗರೆI ಮರೆತೆನಿಷ್ಟು ದಿವಸII
ಸೂರೆಹೋದವೋ ಮಿರಿಮಿರಿ ಬೆಳಕಿನ
ಸಿರಿಗೆ ನಮ್ಮ ಚಿತ್ತಾ
ವಿರಹಕI ಎದಿಹೊತ್ತಿತು ತುರತಾII

ಈ ಬೆಳಕಿನಾಳ ಅದು ಎಸೆವ ಗಾಳ
ಮೈಸೆಳೆವ ಸೂಜಿಗಲ್ಲಾI
ಬೆನ್ನಿನI ಹುರಿ ಬಿಗಿದವಲ್ಲಾI
ತೊಡೆಯಲಿi ಮಿಂಚು ಹರಿದವಲ್ಲಾII
ಅಂತರಂಗದಾ ಶಾಂತಸಾಗರ
ಕಲಕಿ ಹೋದವಲ್ಲಾ
ಹೊಸ ಧಗೆI ಬಾಯಿ ಬಿಡುವುದಲ್ಲಾII

ಹೊಟ್ಟೆಯೊಳಗೆ ಹೊಸ ಲೋಕವಿಟ್ಟು ಹೊಳೆ-
ದೀರಿ ಕ್ಷಿತಿಜಧಾಂಗ
ಕೈಮಾಡಿI ಕರೆಯತೀರಿ ನಮಗI
ಜೀರ್ಣಿಸI ಲಾರೆವಿಂಥ ಬೆರಗII
ಮುಳುಗಿ ಮುಳುಗಿ ನಾ ಏಳಬೇಕು ನಿಮ
ಬೆಳಕಿನಾಗ ಮೊದಲ
ಇಲ್ಲವೆI ನುಂಗಬೇಕು ನಿಮಗII

ಹಾರಿ ಹಾರಿ ಹೌಹಾರಿ ಏರಿ
ಸರಿಮಿಂಚತಾವ ಸೊಡರ
ಸೊಡರಿನI ಮ್ಯಾಲ ಹುಳದ ನದರ
ಅಡರುವ ಮುನ್ನವೆ ರೆಕ್ಕೆ ಸುಟ್ಟವೋ
ಹುಳಾ ಬಿತ್ತು ಕಳಚಿ
ಒಳಗಿನI ದೀಪ ಬಂತು ಬೆಳಗಿ.

                                     - ಡಾ. ಚಂದ್ರಶೇಖರ ಕಂಬಾರ

ಭಾನುವಾರ, ಡಿಸೆಂಬರ್ 29, 2013

ರಾಷ್ಟ್ರಕವಿಗೆ ಜನ್ಮದಿನದ ಶುಭಾಶಯಗಳು..

ಜನ್ಮೋತ್ಸವ



ಇಲ್ಲಿ ಬಾ ಸಂಭವಿಸು ಇಂದೆನ್ನ ಹೃದಯದಲಿ,
ನಿತ್ಯವೂ ಅವತರಿಪ ಸತ್ಯಾವತಾರ!
ಮಣ್ಣಾಗಿ ಮರವಾಗಿ ಮಿಗವಾಗಿ ಖಗವಾಗಿ
ಭವಭವದಿ ಭವಿಸಿ, ಓ ಭವವಿದೂರ,
ಮಣ್ತನಕೆ ಮರತನಕೆ ಮಿಗತನಕೆ ಖಗತನಕೆ
ಮುನ್ನಡೆಗೆ ಕಣ್ಣಾದ ಗುರುವೆ, ಬಾರ!
ಮೂಡಿ ಬಂದಿನ್ನೆನ್ನ ನರರೂಪ ಚೇತನದಿ
ನಾರಾಯಣತ್ವಕ್ಕೆ ದಾರಿ ತೋರ!
ಅಂದು ಅರಮನೆಯಲ್ಲಿ, ಮತ್ತೆ ಸೆರೆಮನೆಯಲ್ಲಿ,
ಅಲ್ಲಿ ತುರುಪಟ್ಟಿಯಲಿ, ಇಲ್ಲಿ ಕಿರುಗುಡಿಸಲಲಿ,
ದೇಶದೇಶದಿ ವೇಷವೇಷಾಂತರವನಾಂತು
ವಿಶ್ವ ಸಾರಥಿಯಾಗಿ ಲೀಲಾರಥವನೆಂತು
ಚೋದಿಸಿರುವೆಯೊ ಅಂತೆ, ಸೃಷ್ಟಿಲೋಲ,
ಅವತರಿಸು ಬಾ ಇಲ್ಲಿ ಇಂದೆನ್ನ ಚೈತ್ಯದಲಿ,
ಹೇ ದಿವ್ಯ ಸಚ್ಚಿದಾನಂದ ಶೀಲ!

                          - ಕುವೆಂಪು
                           ' ಅಗ್ನಿಹಂಸ

ಶುಕ್ರವಾರ, ಡಿಸೆಂಬರ್ 27, 2013

ನಾಡ ದೇವಿಯೆ

ನಾಡದೇವಿಯೆ ಕಂಡೆ ನಿನ್ನ ಮಡಿಲಲ್ಲಿ ಎಂಥ ದೃಶ್ಯ;
ನೋವು ನಗೆಯ ಸಮ್ಮಿಶ್ರದಲ್ಲಿ ಎದೆಯಾಯಿತದಕೆ ವಶ್ಯ.
ಒಂದೆದೆಯ ಹಾಲ ಕುಡಿದವರ ನಡುವೆ ಎಷ್ಟೊಂದು ಭೇದ ತಾಯಿ-
ಒಂದೆ ನೆಲದ ರಸ ಹೀರಲೇನು? ಸಿಹಿ, ಕಹಿಯ ರುಚಿಯ ಕಾಯಿ.
                                                          ನಾಡದೇವಿಯೆ...

ಕತ್ತಲಲ್ಲಿ ಕಂಗೆಟ್ಟು ಎಡವಿ ತಡವರಿಸುತಿರಲು ಮಂದಿ-
ಕಡೆಗಣಿಸುತವರ ನಡೆದಿರುವನೊಬ್ಬ, ಸ್ವಹಿತಕ್ಕೆ ಹಿಡಿದು ದೊಂದಿ.
ಸಂಸ್ಕಾರವಿಲ್ಲ ಹೆಣಕೆಂದು ತಲೆಗೆ ಕೈಹೊತ್ತ ಬಡವನೊಬ್ಬ;
ಇನ್ನೊಬ್ಬ ತಾನು ಆಚರಿಸುತಿರುವ ವೈಭವದ ಹುಟ್ಟುಹಬ್ಬ.
                                                         ನಾಡದೇವಿಯೆ...

ಅನ್ನವಿರದ ಹಸುಳೆಗಳ ತಬ್ಬಿ ಅಳುತಿರುವ ತಾಯ ಕಂದೆ;
ದು:ಖಪೂರ ಉಕ್ಕುಕ್ಕಿ ಮೊರೆಯೆ, ಕೊಚ್ಚಿತ್ತು ಬಾಳದಂಡೆ.
ಹೊಟ್ಟೆಹೇಳಿಗೆಯ ಬಿಚ್ಚಿ, ಹಸಿದ ಹಾವನ್ನು ಚುಚ್ಚಿ ಕೆಣಕಿ-
ಯುಕ್ತಿರಾಗದಲಿ ಕುಣಿಸಿ, ದಣಿಸಿ, ನಲಿದಿಹರು ಹಲರು ಬದುಕಿ.
                                                       ನಾಡದೇವಿಯೆ...

ನರನನ್ನೆ ಗಾಳವಾಗಿಸುತ ಬಾಳ ನೀರಲ್ಲಿ, ನಲಿವ ನರಿಗೆ-
ನಾವೊಂದು ಎನುವ ಸತ್ಯಕ್ಕೆ ಅಡ್ಡಗಾಲೆಳೆವ ನಾಡಿನರಿಗೆ,
ಎಚ್ಚರವ ನೀಡಿ ತಿದ್ದುತಲಿರಲಿ ಕವಿಭಾವವೆಂಬ ಬಡಿಗೆ,
ತಾಯಿ ಭಾರತಿಯೆ, ಇದುವೆ ನಿನಗೆ ನಾ ಸಲಿಸಲಿರುವೆ ಕೊಡುಗೆ.
                                                      ನಾಡದೇವಿಯೆ...

ಗುರಿ ಮುಟ್ಟುತಿರಲಿ ಈ ಜೀವ ತಾನು, ಹಿಡಿದೊಂದು ದಿಟದ ದಾರಿ-
ಮರೆಯದಂತೆ ಹೊರಿಸಿರುವ ಋಣವ, ಕೃತಿಯಲ್ಲಿ ಅದನ್ನು ಸಾರಿ.
ನಿನ್ನೊಲವ ತೈಲ ನನ್ನೆದೆಯೊಳಿರಲಿ-ಬೆಳಗಿರಲಿ ಬಾಳ ಬತ್ತಿ;
ಕೊನೆಕಾಣಲಮ್ಮ ಅನುಭವದಿ ಮಾಗಿ, ನಿನ್ನಡಿಗೆ ಬಾಗಿ ನೆತ್ತಿ.
                                                      ನಾಡದೇವಿಯೆ...

                                   - ಕೆ. ಎಸ್. ನಿಸಾರ್ ಅಹಮದ್
                                     ' ನಿತ್ಯೋತ್ಸವ ' (೧೯೭೬)
ನದಿಯ ನೋಡಬೇಕು

ತುಂಗೆ ದಡದಲ್ಲಿ
ಹೊಂಗೆ ನೆರಳಲ್ಲಿ
                            ಹರಟೆ ಹೊಡೆಯಬೇಕು
ಮಾತು ಸಾಕಾಗಿ
ಮೌನ ಬೇಕಾಗಿ
                           ನದಿಯ ನೋಡಬೇಕು.

ಅಂಥ ಮೌನದಲಿ
ನಿನ್ನ ಇಡಿಯಾಗಿ
                 ನಾನು ಕಾಣಬೇಕು
ಮೌನ ಹೂವಾಗಿ
ಪ್ರೀತಿ ಕಾಯಾಗಿ
                ಪಕ್ವವಾಗಬೇಕು.

ಆ ಹಣ್ಣ ಪಡೆದು
ರೋಮಾಂಚಗೊಂಡು
                           ಒಟ್ಟಾಗಿ ಕೈಯ ಚಾಚಿ
ತನ್ಮಯತೆ ಪಡೆವ
ಆ ಕ್ಷಣದಲಿರುವ
                          ಆನಂದವನ್ನೆ ಬಾಚಿ.

                          - ಸುಮತೀಂದ್ರ ನಾಡಿಗ
ವಾಸಂತಿ

ಕವಿದಂತೆ ಮಂಜು ಈ ಹಗಲಿಗೆ
ಕವಿದಿದೆ ವಿಷಾದ ಈ ಮನಸಿಗೆ

ಹಸಿರ ಹೆಸರಿಲ್ಲ ಗಿಡಮರದಲಿ
ಹಕ್ಕಿದನಿಯಿಲ್ಲ ಪರಿಸರದಲಿ
ಜೀವಕಳೆಯಿಲ್ಲ ಬಾನ ರವಿಗೆ
ನಲ್ಲೆ, ನೀನಿಲ್ಲ ನನ್ನ ಜೊತೆಗೆ

ಹೇಮಂತಗಾನ ನಿನ್ನಗಲಿಕೆ
ಎಷ್ಟು ದಿನ ಇನ್ನೂ ಈ ಬಳಲಿಕೆ
ವಾಸಂತಿ, ಬಾರೆ ಮರಳಿ ಮನೆಗೆ
ಚೇತನವ ತಾರೆ ಜಡ ಹೃದಯಕೆ

                           - ಬಿ. ಆರ್ ಲಕ್ಷ್ಮಣರಾವ್
ನೀರಿಗೆ ಬಿದ್ದ ಹೆಣ್ಣು

ನೀರಿಗೆ ಬಿದ್ದ ಹೆಣ್ಣು ತಾವರೆಯ ತೆನೆಯಾಗಿ
ಹೂವಾಗಲಿಲ್ಲ ಕೆಂಪಾಗಿ.
ಸಾವಿನಲ್ಲಿ ಶಾಂತಿ ಉರುಳಿತ್ತು ತಲೆಕೆಳಕಾಗಿ
ಆ ಎಲ್ಲ ನೋವು ತಂಪಾಗಿ.

ನೀರಿಗೆ ಬಿದ್ದ ಹೆಣ್ಣು ಒಂದೇ ಮುಳುಗು ಮುಳುಗಿ
ಕಂಡಿತ್ತು ಸಾವಿನ ಯುಗಾದಿ.
ಸುತ್ತೆಲ್ಲ ಕಿತ್ತು ಬಿದ್ದಿತ್ತು ಆಸೆಯ ಜೋಲಿ
ತೆರದಿತ್ತು ಹುಡಿಮಣ್ಣ ಹಾದಿ.

ನೀರಿಗೆ ಬಿದ್ದ ಹೆಣ್ಣು ಯಾರಿಗೂ ಹೇಳದೆಯೆ
ಆಗಿತ್ತು ಕೆರೆಗೆ ಆಹುತಿ.
ಹಾಲ ಕಾಣದ ಬದುಕು ಕುಡಿದಿತ್ತು ಕೆರೆಯನೆ;
ಅಲ್ಲಿತ್ತು ಅದರ ಸದ್ಗತಿ.

ಗಂಡ ಬಂದನು ಕಡೆಗೆ ನಡೆಬಂದ ಕಂಬದೊಲು;
ಹತ್ತು ಜನ ಅಲ್ಲೆ ಒದಗಿದರು.
ಬೆಂಕಿ ಹೆಣವನು ನುಂಗಿ ಬೆಂಬೂದಿಯಾಗಿರಲು,
ಉಳಿದವರು ಊರ ಸೇರಿದರು.

ನೀರು ಮುಗಿಸಿದ ಕಥೆಗೆ ಬೆಂಕಿ ಮಂಗಳ ಹಾಡಿ
ನಡೆದಿತ್ತು ದೈವ ಸಂಕಲ್ಪ.
ಇಂಥ ಬಾಳಿಗೆ ಸಾವೆ ನಂದನದ ಕೆರೆ-ಕೋಡಿ;
ಮಸಣದಲಿ ಮಾತ್ರ ಸುಖತಲ್ಪ.

ಹೆಣ್ಣು ಸತ್ತಳು ಏಕೆ? ನೆರೆಯ ನಿರ್ಭಾಗ್ಯರಿಗೆ
ಸಂಶಯದ ಮೇಲೆ ಸಂಶಯ.
ಕಾರಣವೆ ಬಂಗಾರ ಬೇಟೆ ಫಲಿಸದೆ ಕಡೆಗೆ
ಸತ್ತವಳ ಮೇಲೆ ಸಂಶಯ.

ಕೈಯಾರ ಕೆರೆಗೆ ತಳ್ಳಿದನೆ ಮಡದಿಯನಿವನು?
ನ್ಯಾಯದಲಿ ತೀರ್ಪು: ನಿರ್ದೋಷಿ.
ಗದ್ದಲದ ಗಡಸು ನಾಲಗೆಯ ಗಂಡಲ್ಲಿವನು;
ಊರು ಕಂಡಂತೆ ಮಿತಭಾಷಿ.

ಸತ್ತವಳ ಮೇಲೆ ಸಂಶಯ-ಊರಿಗಿವನಂಥ
ಮಾದರಿಯ ಗಂಡ ಆಭರಣ.
ಸತ್ತವಳು ಇಳಿದು ಸತ್ಯವನೊದುರುವಂತಿಲ್ಲ;
ಸಂಗತಿಗೆ ಮೌನದಾವರಣ.

ನೀರಿಗೆ ಬಿದ್ದ ಹೆಣ್ಣ ಗಂಡನ ಹಣೆಯ ಮೇಲೆ
ಬಿಡುಗಡೆಯೆ ನಿರ್ಭಯದ ತಿಲಕ.
ಎದೆಯಲಿ ಏನೊ ಎಂತೊ, ತೋರುವ ಮುಖದ ಮೇಲೆ
ಎಷ್ಟೊಂದು ನೋವು, ನಾಟಕ!

ಸತ್ತಳು ಏಕ ಹೆಣ್ಣು (ಊರಿಗೆ ಇಲ್ಲ ಕಣ್ಣು);
ಅಂತು ಕೇಳಿದನೊಬ್ಬ ಕುಂಟ.
ಸತ್ತರೆ ಏನು ನಷ್ಟ? ಕಾದಿದೆ ಬೇರೆ ಹೆಣ್ಣು;
ಇಂತು ಹೇಳಿದನೊಬ್ಬ ನಂಟ.

ಕನಿಕರದಿಂದ ಬಂದ ಕುರಿಯೊಂದು ನುಡಿದಿತ್ತು:
ಮುಗಿದಿತ್ತು ಹೆಣ್ಣ ಹಣೆಬರಹ.
ಮಾನವ ಜನ್ಮಧಾರಿ ನರಿಯೊಂದು ನಕ್ಕಿತ್ತು!
ನೀರಿಗೆ ಜಾರಿ ಬಿದ್ದ ವಿಷಯ.

                            - ಕೆ. ಎಸ್. ನರಸಿಂಹಸ್ವಾಮಿ
                              ' ಇರುವಂತಿಗೆ '

ಮಂಗಳವಾರ, ಡಿಸೆಂಬರ್ 24, 2013

ನನ್ನ ಹಣತೆ

ಹಣತೆ ಹಚ್ಚುತ್ತೇನೆ ನಾನೂ,
ಈ ಕತ್ತಲನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ;
ಲೆಕ್ಕವೇ ಇರದ ದೀಪಾವಳಿಯ ಹಡಗುಗಳೆ
ಇದರಲ್ಲಿ ಮುಳುಗಿ ಕರಗಿರುವಾಗ
ನಾನು ಹಚ್ಚುವ ಹಣತೆ ಶಾಶ್ವತವೆಂಬ ಭ್ರಾಂತಿ ನನಗಿಲ್ಲ,

ಹಣತೆ ಹಚ್ಚುತ್ತೇನೆ ನಾನೂ;
ಈ ಕತ್ತಲಿನಿಂದ ಬೆಳಕಿನ ಕಡೆಗೆ ನಡೆದೇನೆಂಬ
ಆಸೆಯಿಂದಲ್ಲ.
ಕತ್ತಲಿನಿಂದ ಕತ್ತಲೆಗೇ ತಡಕಾಡಿಕೊಂಡು ಬಂದಿವೆ ಹೆಜ್ಜೆ
ಶತಮಾನದಿಂದಲೂ.
ನಡು ನಡುವೆ ಒಂದಷ್ಟು ಬೆಳಕು ಬೇಕೆಂದು
ಆಗಾಗ ಕಡ್ಡಿ ಗೀಚಿದ್ದೇವೆ,
ದೀಪ ಮುಡಿಸಿದ್ದೇವೆ,
ವೇದ, ಶಾಸ್ತ್ರ, ಪುರಾಣ, ಇತಿಹಾಸ, ಕಾವ್ಯ, ವಿಜಾನಗಳ
ಮತಾಪು-ಪಟಾಕಿ-ಸುರುಸುರುಬತ್ತಿ-ಹೂಬಾಣ
ಸುಟ್ಟಿದ್ದೇವೆ.
"ತಮಸೋ ಮಾ ಜ್ಯೋತಿರ್ಗಮಯಾ" ಎನ್ನುತ್ತ ಬರೀ
ಬೂದಿಯನ್ನೇ ಕೊನೆಗೆ ಕಂಡಿದ್ದೇವೆ.

ನನಗೂ ಗೊತ್ತು, ಈ ಕತ್ತಲೆಗೆ
ಕೊನೆಯಿರದ ಬಾಯಾರಿಕೆ
ಎಷ್ಟೊಂದು ಬೆಳಕನ್ನು ಇದು ಉಟ್ಟರೂ, ತೊಟ್ಟರೂ
ತಿಂದರೂ, ಕುಡಿದರೂ, ಇದಕ್ಕೆ ಇನ್ನೂ ಬೇಕು
ಇನ್ನೂ ಬೇಕು ಎನ್ನುವ ಬಯಕೆ.

ಆದರೂ ಹಣತೆ ಹಚ್ಚುತ್ತೇನೆ ನಾನೂ,
ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ,
ಇರುವಷ್ಟು ಹೊತ್ತು ನಿನ್ನ ಮುಖ ನಾನು, ನನ್ನ ಮುಖ ನೀನು
ನೋಡಬಹುದೆಂಬ ಒಂದೇ ಒಂದು ಆಸೆಯಿಂದ;
ಹಣತೆ ಆರಿದ ಮೇಲೆ, ನೀನು ಯಾರೋ, ಮತ್ತೆ
ನಾನು ಯಾರೋ.

                            - ಜಿ. ಎಸ್. ಶಿವರುದ್ರಪ್ಪ
                               ’ ಗೋಡೆ ’ (೧೯೭೨)
ಮುಚ್ಚುಮರೆಯಿಲ್ಲದೆಯೆ

ಮುಚ್ಚುಮರೆಯಿಲ್ಲದೆಯೆ ನಿನ್ನ ಮುಂದೆಲ್ಲವನು
ಬಿಚ್ಚಿಡುವೆ, ಓ ಗುರುವೆ, ಅಂತರಾತ್ಮಾ:
ನಾಕವಿದೆ, ನರಕವಿದೆ; ಪಾಪವಿದೆ, ಪುಣ್ಯವಿದೆ;
ಸ್ವೀಕರಿಸು, ಓ ಗುರುವೆ, ಅಂತರಾತ್ಮಾ!

ರವಿಗೆ ಕಾಂತಿಯನೀವ ನಿನ್ನ ಕಣ್ಣೀಕ್ಷಿಸಲು
ಪಾಪ ತಾನುಳಿಯುವುದೆ ಪಾಪವಾಗಿ?
ಗಂಗೆ ತಾನುದ್ಭವಿಪ ನಿನ್ನಡಿಯ ಸೋಂಕಿಂಗೆ
ನರಕ ತಾನುಳಿಯುವುದೆ ನರಕವಾಗಿ?

ಸಾಂತ ರೀತಿಯ ನೆಮ್ಮಿ ಕದಡಿರುವುದೆನ್ನಾತ್ಮ;
ನಾಂತ ರೀತಿಯದೆಂತೊ, ಓ ಅನಂತಾ?
ನನ್ನ ನೀತಿಯ ಕರುಡಿನಿಂದೆನ್ನ ರಕ್ಷಿಸಯ್;
ನಿನ್ನ ನೀತಿಯ ಬೆಳಕಿನಾನಂದಕೊಯ್!

                            - ಕುವೆಂಪು
                              ' ಅಗ್ನಿಹಂಸ '

ಸೋಮವಾರ, ಡಿಸೆಂಬರ್ 23, 2013


'ನಿನ್ನೆ ಇದ್ದರು ಅವರು, ಇಂದಿಲ್ಲ..'




                     ಹಾಡು ಹಳೆಯದಾದರೇನು ಭಾವ ನವ ನವೀನ ಎಂದು ಎದೆ ತುಂಬಿ ಹಾಡಿದ ಕವಿ..
                           ಪ್ರೀತಿ ಇಲ್ಲದ ಮೇಲೆ ಎಲ್ಲವೂ ಹೇಗೆ ಸಾಧ್ಯ ಎಂದು ಅಚ್ಚರಿಗೊಳಿಸಿದ ಕವಿ..
                                 ಕಾಣದ ಕಡಲನು ಕಾಣಬಲ್ಲೆನೇ,ಕೂಡಬಲ್ಲೆನೇ ಎಂದು ಹಂಬಲಿಸಿದ ಕವಿ.. 
                                                                                                                   ..ಇನ್ನಿಲ್ಲ..

      'ಇನ್ನಿಲ್ಲ' ಎಂಬ ಕಹಿಸತ್ಯವನ್ನೇ ಒಪ್ಪುತ್ತಿಲ್ಲ ಮನಸು. ಅತ್ಯಂತ ಆಪ್ತರೊಬ್ಬರನ್ನು ಕಳೆದುಕೊಂಡಂತೆ ಮನಸು ಭಾರ ಭಾರ.. ಏನು ಮಾಡಲೂ ತೋಚದ ಶೂನ್ಯ ಮನಸು..

       ಮೊನ್ನೆ ಮೊನ್ನೆಯೂ ಅವರ ಕವನಗಳನ್ನು ಓದುತ್ತಾ, ಆಸ್ವಾದಿಸುತ್ತಾ ಅವರ ಕವಿಹೃದಯದ ಆಳ-ವಿಸ್ತಾರಗಳ ಬಗೆಗೆ ಯೋಚಿಸಿ ಬೆರಗುಗೊಂಡಿದ್ದೆ. ಕನ್ನಡ ಸಾಹಿತ್ಯ ಲೋಕದಿಂದ ಮತ್ತೊಬ್ಬ ಹಿರಿಯ ಕವಿ ದೂರವಾದರೇ ..? ಇಲ್ಲ, ಹಾಗೆನ್ನಲು ನಾನೊಪ್ಪುವುದಿಲ್ಲ!
     
       ಕಾವ್ಯಪ್ರಿಯರಿರುವವರೆಗೆ, ಹಾಡುಗಾರರಿರುವವರೆಗೆ.. ತಮ್ಮ ಸುಂದರ ಕವಿತೆಗಳಲ್ಲಿ, ಸೊಗಸಾದ ಭಾವಗೀತೆಗಳಲ್ಲಿ ಜಿ.ಎಸ್. ಎಸ್. ಸದಾ ಜೀವಂತವಾಗಿರುವರು..

       ಹೌದು, ಕಾವ್ಯಲೋಕದಲ್ಲಿ ನನ್ನ ನೆಚ್ಚಿನ ಕವಿ ಸದಾ ಅಜರಾಮರರು..

ಹನಿಗಣ್ಣಿನಿಂದ,
ಕನಸು.. 
ಈ ಸುಂದರ ಸಂಜೆ ಬರಿ ಬಂಜೆ

ಈ ಸುಂದರ ಸಂಜೆ- 
ಬರಿ ಬಂಜೆ:
ನೀನಿಲ್ಲದೆ, ನಲ್ಲೆ,
ನಾ ಬಲ್ಲೆ!

ಹೊಲಗಳ ಸಿರಿಸೊಂಪು
ಕಣ್ಗಿಂಪು!
ಚೆಂಬಿಸಿಲಿನ ಶಾಂತಿ
ನಗೆ ಕಾಂತಿ!

ಕಣಿವೆಯ ತೋಪಿನಲಿ
ಪಸುರಿನಲಿ
ಕೋಗಿಲೆಯುಲಿಯುತಿದೆ;
ನಲಿಯುತಿದೆ!

ನೀಲಿಯ ದೂರದಲಿ
ಗಿರಿಪಂಕ್ತಿ
ಗಗನದ ತೀರದಲಿ
ದಿಗ್ದಂತಿ!

ದೆಸೆ ಏಳೂ ಸೊನ್ನೆ,
ಓ ರನ್ನೆ;
ಎಂಟನೆಯದು ಮಾತ್ರ
ಮಧುಪಾತ್ರ!

ಮನೆಯಿದೊ 'ಉದಯರವಿ'!
ವಿರಹಿ ಕವಿ!
ಪಶ್ಚಿಮದಸ್ತ ಛವಿ
ಪಾಳು ಗವಿ!

ಈ ಸುಂದರ ಸಂಜೆ-
ಬರಿ ಬಂಜೆ:
ನೀನಿಲ್ಲದೆ, ನಲ್ಲೆ,
ನಾ ಬಲ್ಲೆ!

                        - ಕುವೆಂಪು
                            ' ಪ್ರೇಮ ಕಾಶ್ಮೀರ '
ಸಂಜೀವಿನಿ

ಈಗೇಕೆ ನೀ ಬಂದೆ ಬಳಲಿದ ಈ ಬಾಳಿಗೆ?
ಸೋತಿಹುದು ಈ ಜೀವ ಸೋಲುಗಳ ದಾಳಿಗೆ

ನಾ ಬಂದೆ ಹೊಸ ಹುರುಪು ತುಂಬಲು ಈ ತೋಳಿಗೆ
ನಂಬಿಸಲು ಹುರಿದುಂಬಿಸಲು ನಿನ್ನನ್ನು ನಾಳೆಗೆ

ಹೊಳಪಿಲ್ಲ ಕಣ್ಣಲ್ಲಿ, ಬಾಳಿಗಿಲ್ಲ ಬೆಳಗು
ನಡುಗಡಲ ಬಿರುಗಾಳಿಯಲಿ ಒಡೆದು ನಿಂತ ಹಡಗು
ಸ್ವಪ್ನ ಸೌಧಗಳ ಮೇಲೆ ಬೆದರುಗೊಂಬೆ ನಾನು

ನನ್ನ ಒಡಲಿನ ಮಿಂಚನು ನಿನ್ನಲ್ಲಿ ಹರಿಸುವೆ
ಈ ಗೆಜ್ಜೆ ಸಡಗರ ನಿನ್ನ ಹೆಜ್ಜೆಗೆ ನಾ ಕೊಡುವೆ
ನಿನಗೆ ಮರುಹುಟ್ಟು ನೀಡುವೆ ನಾನು ಸಂಜೀವಿನಿ

ಸರಿಯುವುದೇ ಕಾರಿರುಳು ತೆರೆದು ಹೊಸ ದಿಗಂತ?
ಚಿಗುರುವುದೇ ಜಡ ಹೃದಯ ಉಂಟೆ ಮರು ವಸಂತ?
ಕತ್ತಲ ಬಸಿರನು ನಾ ಸೀಳುವೆ ಹೊಸ ಹಗಲ ತೆರೆಯುವೆ

ನಿನ್ನಿಂದ ಹೊಸ ಹುರುಪು ಬಂದಿದೆ ಈ ಬಾಳಿಗೆ
ಸಾಗೋಣ ಜೊತೆಯಾಗಿ ಗೆಲುವಿಹುದು ನಾಳೆಗೆ

                                     - ಬಿ. ಆರ್. ಲಕ್ಷ್ಮಣರಾವ್

ಭಾನುವಾರ, ಡಿಸೆಂಬರ್ 22, 2013

ಕೋಗಿಲೆ!

ತುಂಬುತಿಂಗಳಿನ ಮಲ್ಲಿಗೆ ಹಂಬಿನ
ನಂಬದ ಬೆಳಕಿನ ಸೆರಗಿನಲಿ.
ತುಂಬಿ ತುಂಬಿಬಹ ನಾಡಿನ ಪಾಡಿನ
ತುಂಬದಾಸೆಗಳ ಕೊರಗಿನಲಿ-
ಅಕ್ಕ ಓ ಕೋಗಿಲೆ!
ಚಿಕ್ಕ ಹೂ ಕೋಗಿಲೆ,

ಮರದ ಮೇಲೆ ತೂಗಾಡುವ ಹಾಡಿಗೆ
ಹೆಸರು ಬಂದಿತೆ ಕೋಗಿಲೆ?
ಸೊಕ್ಕಿಬರುವ ಸುಮ್ಮಾನದ ಕೂಗಿಗೆ
ಸುಖದ ಊರ ಹೆಬ್ಬಾಗಿಲೆ
ತೆರೆದುದೇ, ಈಗಲೆ?
-ಕಾಣದೇ ಕೋಗಿಲೆ!

ಅಲ್ಲೆ ಇರು ನೀನಿಲ್ಲೆ ಇರು ನೀ
ನೆಲ್ಲೆ ಇರು ನೀ ಬರಿಯದನಿ!
ಎಲ್ಲೂ ನಾದದ ತುಷಾರ ವಾಹಿನಿ;
ಎತ್ತರದುತ್ತರ ನಿನ್ನ ದನಿ!
-ಬಾನಹೂ ಕೋಗಿಲೆ:
ಮುಗಿಲ ಮುತ್ತಾಗಲೆ!

ಹೂವು ಅಲ್ಲದ ಎಲೆಯೂ ಅಲ್ಲದ
ಬನದ ಹುಟ್ಟು ಈ ಕೋಗಿಲೆ;
ಎದೆಯ ಗಾಯನದಲಿ ಮೆಲ್ಲಗೆ ಸುಳಿಯುವ
ದನಿ ನೇಗಿಲೆ ಕೋಗಿಲೆ?
-ಹಾಡಿತೆ, ಕೋಗಿಲೆ;
ಇಲ್ಲವೆ, ಹಸುರೆಲೆ.

                                          - ಕೆ. ಎಸ್. ನರಸಿಂಹಸ್ವಾಮಿ
                                             ' ಉಂಗುರ '
ನನ್ನ ಇನಿಯನ ನೆಲೆಯ ಬಲ್ಲೆಯೇನೆ?

ನನ್ನ ಇನಿಯನ ನೆಲೆಯ ಬಲ್ಲೆಯೇನೆ
ಹೇಗೆ ತಿಳಿಯಲಿ ಅದನು ಹೇಳೆ ನೀನೇ?

ಇರುವೆ ಹರಿಯುವ ಸದ್ದು
ಮೊಗ್ಗು ತೆರೆಯುವ ಸದ್ದು
ಮಂಜು ಸುರಿಯುವ ಸದ್ದು ಕೇಳುವವನು,
ನನ್ನ ಮೊರೆಯನೇಕೆ ಕೇಳನವನು?

ಗಿರಿಯ ಎತ್ತಲು ಬಲ್ಲ
ಶರಧಿ ಬತ್ತಿಸಬಲ್ಲ
ಗಾಳಿಯುಸಿರನೆ ಕಟ್ಟಿ ನಿಲ್ಲಿಸಬಲ್ಲ
ನನ್ನ ಸೆರೆಯಿಂದೇಕೆ ಬಿಡಿಸಲೊಲ್ಲ?

ನೀರು ಮುಗಿಲಾದವನು
ಮುಗಿಲು ಮಳೆಯಾದವನು
ಮಳೆ ಬಿದ್ದು ಬೆಳೆ ಎದ್ದು ತೂಗುವವನು,
ನಲ್ಲೆಯಳಲನ್ನೇಕೆ ಅರಿಯನವನು?

                                                    - ಡಾll ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ 
ಪ್ರತೀಕ್ಷೆ

ಈ ದಿನಾಂತ ಸಮಯದಲಿ
ಉಪವನದೇಕಾಂತದಲಿ
ಗೋಧೂಳಿ ಹೊನ್ನಿನಲಿ-
                   ಬರದೆ ಹೋದೆ ನೀನು;
                    ಮರೆತುಹೋದೆ ನೀನು.

ನಾ ಬಿಸುಸುಯ್ಯುವ ಹಂಬಲವೊ,
ಶುಭ ಸಮ್ಮಿಲನದ ಕಾತರವೊ!
ಬಾ ಇನಿಯ, ಕರೆವೆ ನೊಂದು-
                  ಬರದೆ ಹೋದೆ ನೀನು;
                   ಮರೆತುಹೋದೆ ನೀನು.
          ಈ ದಿನಾಂತ...

ತನುಮನದಲಿ ನೀನೆ ನೆಲಸಿ
ಕಣಕಣವೂ ನಿನ್ನ ಕನಸಿ
ಕಣ್ಣು ಹನಿದು ಕರೆವೆ ನಿನ್ನ-
                ಬರದೆ ಹೋದೆ ನೀನು;
                 ಮರೆತುಹೋದೆ ನೀನು.
          ಈ ದಿನಾಂತ...

ಇಳೆಗಿಳಿದಿದೆ ಇರುಳ ನೆರಳು
ದನಿ ಕಳೆದಿದೆ ಹಕ್ಕಿಗೊರಳು.
ಶಶಿ ಮೆರೆಸಿರೆ ತೋರು ಬೆರಳೂ-
                 ಬರದೆ ಹೋದೆ ನೀನು;
                 ಮರೆತುಹೋದೆ ನೀನು.
         ಈ ದಿನಾಂತ...

ಹಗಲಿರುಳಿನ ಈ ನಿರೀಕ್ಷೆ
ಈ ಯಾಚನೆ ಪ್ರಣಯ ಭಿಕ್ಷೆ
ಮೊರೆಯಾಲಿಸಿ, ಕಳೆಯೆ ಶಿಕ್ಷೆ-
                ಬರದೆ ಹೋದೆ ನೀನು;
                 ಮರೆತುಹೋದೆ ನೀನು.
         ಈ ದಿನಾಂತ...

                                               - ಕೆ. ಎಸ್. ನಿಸಾರ್ ಅಹಮದ್
                                            ' ಬಹಿರಂತರ ' (೧೯೯೦)

ಗುರುವಾರ, ಡಿಸೆಂಬರ್ 19, 2013

ಇದಾವ ರಾಗ?

ಇದಾವ ರಾಗ?
ಮತ್ತೆ.. ಇದಾವ ರಾಗ,
ಎದೆಯಾಳದಿಂದೆದ್ದು ನಭನೀಲಿಗೇರುತಿದೆ-

ಯುಗ ಯುಗಾಂತರದೆದೆಯ ನೋವುಗಳ ಕೆರಳಿಸಿದೆ
ಜನುಮಗಳ ಕಣ್ಣೀರ ಕೊಳಗಳನು ಕದಡುತಿದೆ
ಮುರಿದ ಶತ ಬಯಕೆಗಳ ಮೇಲೆತ್ತಿ ತೋರುತಿದೆ
ಬಗೆಯ ಬಾನ್ ಬಯಲಿನಲಿ ಮೋಡಗಳ ಕವಿಸುತಿದೆ.

ಹಚ್ಚಹಸುರೆದೆಯಿಂದ ಬಿಸಿಯುಸಿರ ಹೊಮ್ಮಿಸಿದೆ
ಜೀವನದ ತಂತಿಗಳ ಝಮ್ಮೆಂದು ನಡುಗಿಸಿದೆ
ಸುಪ್ತಜ್ವಾಲಾಮುಖಿಯ ತಟ್ಟಿ ಎಚ್ಚರಿಸುತಿದೆ
ಹಣೆಯ ಬರೆಹವನೊರಸಿ ಬೇರೊಂದ ಬರೆಯುತಿದೆ!

                            - ಜಿ. ಎಸ್. ಶಿವರುದ್ರಪ್ಪ
                              ' ಸಾಮಗಾನ ' (೧೯೫೧)
 ತೊರೆಯ ಹಂಬಲ

ಕಾಣದ ಕಡಲಿಗೆ ಹಂಬಲಿಸಿದೆ ಮನ
ಕಾಣಬಲ್ಲೆನೇ ಒಂದು ದಿನ?
ಕಡಲನು ಕೂಡಬಲ್ಲೆನೇ ಒಂದು ದಿನ?

ಕಾಣದ ಕಡಲಿನ ಮೊರೆತದ ಜೋಗುಳ
ಒಳಗಿವಿಗೆಂದೂ ಕೇಳುತಿದೆ
ನನ್ನ ಕಲ್ಪನೆಯು ತನ್ನ ಕಡಲನೇ
ಚಿತ್ರಿಸಿ ಚಿಂತಿಸಿ ಸುಯ್ಯುತಿದೆ
ಎಲ್ಲಿರುವುದೊ ಅದು
ಎಂತಿರುವುದೊ ಅದು
ನೋಡಬಲ್ಲೆನೇ ಒಂದು ದಿನ
ಕಡಲನು ಕೂಡಬಲ್ಲೆನೇ ಒಂದು ದಿನ?

ಸಾವಿರ ಹೊಳೆಗಳು ತುಂಬಿ ಹರಿದರೂ
ಒಂದೇ ಸಮನಾಗಿಹುದಂತೆ!
ಸುನೀಲ ವಿಸ್ತರ ತರಂಗ ಶೋಭಿತ
ಗಂಭೀರಾಂಬುಧಿ ತಾನಂತೆ!
ಮುನ್ನೀರಂತೆ
ಅಪಾರವಂತೆ
ಕಡಲನು ಕಾಣಬಲ್ಲೆನೇ ಒಂದು ದಿನ.
ಅದರೊಳು ಕರಗಲಾರೆನೇ ಒಂದು ದಿನ.

ಜಟಿಲ ಕಾನನದ ಕುಟಿಲ ಪಥಗಳಲಿ
ಹರಿವ ತೊರೆಯು ನಾನು!
ಎಂದಿಗಾದರೂ ಕಾಣದ ಕಡಲಿಗೆ
ಸೇರಬಲ್ಲೆನೇನು
ಆ ಪುಣ್ಯವೆಂದಿಗೊ
ಕಾಲವೆಂದಿಗೊ
ಕಡಲೊಲವಿನ ಆ ರತ್ನ ಗರ್ಭದಲಿ
ಸೇರಬಹುದೆ ನಾನು
ಕಡಲ ನೀಲಿಯೊಳು
ಕರಗಬಹುದೆ ನಾನು?

                             - ಜಿ. ಎಸ್. ಶಿವರುದ್ರಪ್ಪ
                             ' ಚೆಲುವು-ಒಲವು ' (೧೯೫೩)


ಬುಧವಾರ, ಡಿಸೆಂಬರ್ 18, 2013

ನಿತ್ಯೋತ್ಸವ

ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ
ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ,
ನಿತ್ಯಹರಿದ್ವರ್ಣವನದ ತೇಗ ಗಂಧ ತರುಗಳಲ್ಲಿ -
ನಿತ್ಯೋತ್ಸವ, ತಾಯಿ, ನಿತ್ಯೋತ್ಸವ ನಿಮಗೆ

ಇತಿಹಾಸದ ಹಿಮದಲ್ಲಿನ ಸಿಂಹಾಸನ ಮಾಲೆಯಲಿ,
ಗತಸಾಹಸ ಸಾರುತಿರುವ ಶಾಸನಗಳ ಸಾಲಿನಲ್ಲಿ,
ಓಲೆಗರಿಯ ಸಿರಿಗಳಲ್ಲಿ, ದೇಗುಲಗಳ ಭಿತ್ತಿಗಳಲ್ಲಿ -
ನಿತ್ಯೋತ್ಸವ, ತಾಯಿ, ನಿತ್ಯೋತ್ಸವ...

ಹಲವೆನ್ನದ ಹಿರಿಮೆಯೆ, ಕುಲವೆನ್ನದ ಗರಿಮೆಯೆ,
ಸದ್ವಿಕಾಸಶೀಲ ನುಡಿಯ ಲೋಕಾವೃತ ಸೀಮೆಯೆ
ಈ ವತ್ಸರ ನಿರ್ಮತ್ಸರ ಮನದುದಾರ ಮಹಿಮೆಯೆ -
ನಿತ್ಯೋತ್ಸವ, ತಾಯಿ, ನಿತ್ಯೋತ್ಸವ...

                                     - ಕೆ. ಎಸ್. ನಿಸಾರ್ ಅಹಮದ್
                                     ' ನಿತ್ಯೋತ್ಸವ ' (೧೯೭೬)


ಕಾರಣ ಯಾರಿಗೆ ಗೊತ್ತು?

ಮದುವೆಯ ಹೆಣ್ಣು; ನಾಳೆಯೆ ಮದುವೆ; ಇವಳೇಕೆ
ಮೂಲೆಯ ಹಿಡಿದು ಮಲಗಿಹಳು?
ಬಿಳಿವಲ್ಲಿ ಬೆನ್ನ ಹತ್ತಿರವಿಹುದು; ಹೂದಂಡೆ
ಹೆರಳಲ್ಲಿ; ಮಾತಿಲ್ಲ; ಉಸಿರು.

ಥಳಥಳಿಸುವ ಕಣ್ಣ ಮುಚ್ಚಿ, ಕೆದರಿದ ಕುರುಳ
ಹತ್ತಾರು ದಿಕ್ಕಿಗೆ ಹರಿಸಿ,
ಹೊದಿಕೆಯ ಹೊರಗೆ ಮುಂಗೈ ಬೀಸಿ, ನಡುಬೆರಳ
ಉಂಗುರುವ ನಡುಹರಳ ಜ್ವಲಿಸಿ,

ಬೆನ್ನ ಸೆರಗಿನ ಮೇಲೆ ಅರಿಯದೆ ತಂಗಿದ
ಜರತಾರಿ ಹೂವನು ಮರೆತು,
ತಲೆಯಿಟ್ಟ ತುಂಬುದಿಂಬಿನ ಮೇಲೆ ಹಣೆಗಿಟ್ಟ
ಕುಂಕುಮದ ಒತ್ತನು ಕುರಿತು,

ಏನೇನೊ ಮಾತು-ದೇವರು ಬಲ್ಲ!-ಮಾತೆಲ್ಲ
ಹೊಂದದೆ ಒಡೆದ ಕಿರುಮುತ್ತು;
ಮನಸಿನ ಮೇಲುಮಾಳಿಗೆಯಲ್ಲಿ ಬೆಳಕಿಲ್ಲ.
ಕಾರಣ ಯಾರಿಗೆ ಗೊತ್ತು?

                                - ಕೆ. ಎಸ್. ನರಸಿಂಹಸ್ವಾಮಿ
                                                                                     ' ಇರುವಂತಿಗೆ '
ಮೌನ 

ಏಕೆ ಮೌನವ ತಾಳಿದೆ 
ನೀನೇಕೆ ಮಾತನು ಹೂಳಿದೆ
ನಾಳೆಗೊಂದು ಬಾಳಿದೆ 
ಎಂದು ಲೋಕವು ನಂಬಿದೆ. 

ಕಾಳಮೇಘವು ತುಂಬಿದೆ, ನಿಜ,
ಸೂರ್ಯನನ್ನೇ ನುಂಗಿದೆ,
ಆದರೂ ಮಳೆ ಬರಲಿದೆ,
ಬಾನು ತಿಳಿಯಲು ಕಾದಿದೆ, ಅದ 
ನಂಬಬಾರದು ಏತಕೆ?
ಬರಿದೆ ಅಳುವುದೆ ಭೂತಕೆ?

ಬೇಸಗೆಯು ಬರಬಾರದೆ?
ಬಿಸಿಲು ಮಳೆಯನು ತಾರದೆ?
ಬಿಸಿಲ ಸುಮ್ಮನೆ ದೂರದೆ 
ಸುಮ್ಮನೇ ಇರಬಾರದೆ?
ಪೈರು ಬಾರದು ಎಂದು ಅಳುವುದೆ?
ಕಾಳು ನೆಲದಲ್ಲೂರದೆ?

ಬೆಂಕಿಪ್ರಳಯದ ಊಹೆಗೆ 
ನೀನು ಉರಿವುದೆ ಪ್ರೇಯಸಿ?
ನನ್ನ ನಂಬದೆ ನೀನು ಅಳುವುದೆ?
ನನ್ನ ಸುಮ್ಮನೆ ನೋಯಿಸಿ?

                                 - ಸುಮತೀಂದ್ರ ನಾಡಿಗ 
ನಾನು ಬರೆಯುತ್ತೇನೆ  

ನಾನು ಬರೆಯುತ್ತೇನೆ
ಕಾಳ ರಾತ್ರಿಗಳಲ್ಲಿ ಬಂದು ಕದ ತಟ್ಟುವ 
ಧ್ವನಿಗಳನ್ನು ಕುರಿತು. 
ನಾನು ಬರೆಯುತ್ತೇನೆ
ಬಿರುಗಾಳಿಯಲ್ಲಿ ಕಡಲಿನ ಮೇಲೆ
ಹೊಯ್ದಾಡುವ ದೋಣಿಗಳನ್ನು ಕುರಿತು. 

ನಾನು ಬರೆಯುತ್ತೇನೆ
ನೆಲದಾಳಗಳಲ್ಲಿ ಮಲಗಿರುವ ಮೂಳೆಗಳ
ನಿಟ್ಟುಸಿರನ್ನು ಕುರಿತು. 

ನಾನು ಬರೆಯುತ್ತೇನೆ
ಸಂಜೆಗತ್ತಲಿನಲ್ಲಿ ಕರಗುತ್ತಿರುವ
ಉಜ್ವಲವಾದ ಹಗಲುಗಳನ್ನು ಕುರಿತು.

ನಾನು ಬರೆಯುತ್ತೇನೆ
ಶತಮಾನಗಳ ಕತ್ತಲನ್ನೊಡೆದು
ಮೆತ್ತಗೆ ತಲೆಯೆತ್ತುವ ಮೊಳಕೆಗಳನ್ನು ಕುರಿತು.

ನಾನು ಬರೆಯುತ್ತೇನೆ
ಕೊನೆಯಿರದ ಬೀದಿಗಳ ಮೇಲೆ
ಕೀರ್ತಿಗೆ ಕಚ್ಚಾಡುವವರನ್ನು ಕುರಿತು.
ಅರಳುವ ಕನಸುಗಳನ್ನು ಕುರಿತು
 ಉರುಳುವ ಚಕ್ರಗಳನ್ನು ಕುರಿತು  
ನಾನು ಬರೆಯುತ್ತೇನೆ, ನನ್ನ 
ಒಂದೊಂದೇ ಎಲೆಯುದುರಿ
ನಾನು ಬೋಳಾಗುವುದನ್ನು ಕುರಿತು. 

                                  - ಜಿ. ಎಸ್. ಶಿವರುದ್ರಪ್ಪ
                                    ' ಚಕ್ರಗತಿ ' (೧೯೯೨)

ಸೋಮವಾರ, ಡಿಸೆಂಬರ್ 16, 2013

ಗೆಳೆಯರು 


ಗೆಳೆಯರಿರಲಿ ಈ ಬಾಳಿನಲಿ
 ಗೆಳೆಯರಿರಲಿ ಕೊನೆ ತನಕ
ಹಗುರ ಹೃದಯ, ತಿಳಿ ಮನಸಿರಲಿ
ತೊರೆದು ಎಲ್ಲ ತವಕ

ದುಗುಡ ಮಡುವಾದ ಮೋಡವ ತಡೆದು
ಕಂಬನಿಗರೆಸುವ ಬೆಟ್ಟಗಳು
ಮನಸಿಗೆ ಮೆತ್ತಿದ ಕೊಳೆಯನು ತೊಳೆಯಲು
ನಿರ್ಮಲ ಸ್ನಾನಘಟ್ಟಗಳು

ಹರಿವ ನೀರು ಹೊಲಗದ್ದೆಗೆ ಸೇರಲು
ಹಳ್ಳ ನಾಲೆ ಕೆರೆ ಕೊಳ್ಳಗಳು
ಬೆಳೆದ ದವಸವನು ಕೇರುವ ಮೊರಗಳು
ಕಾಳನು ಅಳೆಯುವ ಬಳ್ಳಗಳು

ಶ್ರಮದ ಸಾಧನೆಗೆ ಬೆನ್ನ ಚಪ್ಪರಿಸಲು
ತೊಡಿಸಲು ಹಿಗ್ಗಿನ ಮಾಲೆ
ಬೀಗಿ ಉಬ್ಬಿದರೆ ಚುಚ್ಚಿ ಎಚ್ಚರಿಸಲು
ಬಿದ್ದರೆ ಎತ್ತಲು ಮೇಲೆ

                                   - ಬಿ. ಆರ್. ಲಕ್ಷ್ಮಣರಾವ್
ಅನಾದಿಗಾನ  


 ಅನಾದಿಗಾನವು ನಾನು - ಹೇ
 ಅನಂತಗಾಯಕನೇ - ನಿನ್ನ ll ಪ ll 

ರಚಿಸಿದೈ ಈ ಗಾನಮಾಧುರ್ಯಕಾಗಿ ನೀಂ
ವಿಶ್ವವೆಂಬುವ ಮಹಾ ನಿನ್ನ ವೀಣೆಯನು;
ನಿನ್ನ ಸ್ವರ್ಶನಕೆ ಆದಿಯಲಿ ಆ ಜಡವೀಣೆ
ಹಾಡತೊಡಗಿತು ನನ್ನ ಜೀವಗಾನವನು! 

ಈ ಗಾನವನು ಕೇಳಿ ರವಿಚಂದ್ರತಾರಾಳಿ
ರಾಸಲೀಲೆಗೆ ತೊಡಗಿದವು ಹರ್ಷ ತಾಳಿ!
ಕಾಲದೇಶಾಕಾಶ ಸತ್ಯ ಮಿಥ್ಯೆಗಳೆಲ್ಲ
ಆನಂದ ಸ್ಫೂರ್ತಿಯಲಿ ಮೈತಿಳಿದುವೆಲ್ಲ!

ಗಾನವಾನಂದದಲಿ ಗಾಯಕನ ರಮಿಸುತಿದೆ;
ಚಿರಮಧುರ ನೂತ್ನವಾ ಗೀತರಸಪಾನ;
ಗಾನಗಾಯಕರೊಲ್ಮೆ ತೀರ್ಥದಲಿ ಲಭಿಸುತಿದೆ
ಕಲ್ಪಬುದ್ಭುದಗಳಿಗೆ ಸಂಸಾರಸ್ನಾನ!  

 
                                            - ಕುವೆಂಪು
                                              ' ಅಗ್ನಿಹಂಸ '