ಗುರುವಾರ, ಜನವರಿ 19, 2012

ಮತ್ತಷ್ಟು ಕವನಗಳೊಂದಿಗೆ..


ಕಾವ್ಯ ಪ್ರೇಮಿಗಳೇ,

     ಮನಸಿನ ಅರ್ಥವಿಲ್ಲದ ಅಸಹನೆ, ಕಾರಣವಿಲ್ಲದ ಜಡತ್ವಕ್ಕೆ ಕಾರಣ ಹುಡುಕುತ್ತಿರುವಾಗ ನನಗೆ ಇತ್ತೀಚಿನ ಪುಸ್ತಕ ಮೇಳವೊಂದರಲ್ಲಿ ಉತ್ತರ ದೊರೆಯಿತು. ಕುವೆಂಪು, ಜಿ.ಎಸ್. ಶಿವರುದ್ರಪ್ಪ, ಬಿ.ಆರ್. ಲಕ್ಷ್ಮಣರಾವ್ ಮುಂತಾದವರ ಕವನ ಸಂಕಲನಗಳು ಕಣ್ಣಿಗೆ ಬಿದ್ದಾಗ ಇಷ್ಟು ದಿನ  ಕಳೆದುಕೊಂಡಿದ್ದೇನೆಂಬುದರ ಅರಿವಾಯ್ತು ..

    'ಕಣಜ'ದಲ್ಲಿ ಹೊಸ ಕವಿತೆಗಳನ್ನು ತುಂಬದೆ, ಯಾಂತ್ರಿಕ ಜೀವನದಲ್ಲಿ ಮುಳುಗಿದ್ದ ನಾನು ಮತ್ತೆ ಕಾವ್ಯ ಪ್ರಪಂಚಕ್ಕೆ ಹಿಂದಿರುಗಿದ್ದೇನೆ. 'ಎಲ್ಲಿ ಹೋದಿರಿ?, 'ಕವನಗಳನ್ನು ಪ್ರಕಟಿಸಿ' ಎಂಬೆಲ್ಲ ಸಂದೇಶಗಳ ಮೂಲಕ ನೀವು ತೋರಿದ ಅಕ್ಕರೆಗೆ ಧನ್ಯವಾದ ಹೇಳುತ್ತ, ಇಷ್ಟು ದಿನ ನಿಮ್ಮನ್ನು ಕಾಯಿಸಿದ ತಪ್ಪಿಗೆ ಕ್ಷಮೆ ಕೇಳುತ್ತ, ಮತ್ತಷ್ಟು ಕವಿತೆಗಳು ನಿಮಗಾಗಿ..


    ಅಕ್ಕರೆಯಿಂದ,
    ಕನಸು..
ನಿನ್ನಿಂದ

ಜೀವ ಬಂದಂತೆ
ಸವಿಭಾವ ಬಂದಂತೆ
ಇನಿಯಾ, ನೀ ಬಂದೆ
ನೀ ಬಂದೆ ನನ್ನ ಬಾಳಿಗೆ

ನಿನ್ನ ನೋಟವೆ ಚುಂಬಕ
ನಿನ್ನ ನಗೆಯೋ ಮೋಹಕ
ನಾ ಸೋತೆ, ಶರಣಾದೆ
ನಿನ್ನ ಸ್ಪರ್ಶಕೆ
ಮಿಂಚು ಹರಿದಂತೆ
ನನ್ನ ಧಮನಿ ಧಮನಿಯಲಿ
ಘಲ್ಲೆಂದು ಈ ಮೊಗ್ಗರಳಿ
ಹೂವಾಯಿತು

ಬಂತು ಹೂವಿಗೆ ಪರಿಮಳ
ಬಣ್ಣದೋಕುಳಿ ದಳದಳ
ಈ ಅಂದ ಮಕರಂದ
ಎಲ್ಲಾ ನಿನ್ನಿಂದ
ಪ್ರೀತಿ ನೀನೆರೆದೆ
ನನ್ನ ಬಾಳ ಬೇರಿಗೆ
ಈ ಹೂವು ಕಾಯಾಗಿ
ಹಣ್ಣಾಯಿತು

                                   - ಬಿ. ಆರ್. ಲಕ್ಷ್ಮಣರಾವ್
ಪುಟ್ಟ ಕೊಳ

ನನ್ನವಳು, ಈ ನನ್ನಾಕೆ
ಹರಿಯುವ ನದಿಯಲ್ಲ,
ಸರಿವ ಸರಿತೆಯಲ್ಲ,
ಇವಳೊಂದು ಪುಟ್ಟಕೊಳ,
ನನ್ನ ಬಾಳಿನ ಜೀವ ಜಲ.

ಹರಿಯುವ ನದಿಯಲ್ಲ,
ಒಳಸುಳಿಗಳ ಭಯವಿಲ್ಲ,
ಕಾಣದ ಕಡಲಿನ ಕರೆಗೆ ಓಗೊಟ್ಟು
ತೊರೆದುಹೊಗುವಂಥ ತೊರೆಯಲ್ಲ,
ಇವಳೊಂದು ಪುಟ್ಟ ಕೊಳ,
ನನ್ನ ಬಾಳಿನ ಜೀವ ಜಲ.

ಹಗಲು ರವಿ, ಬೆಟ್ಟ, ಮುಗಿಲು,
ಚಿಕ್ಕೆ, ಚಂದಿರನ ಇರುಳು
ಮುಕ್ಕಾಗದಂತೆ ಪ್ರತಿಬಿಂಬಿಸುವ
ನಿರ್ಮಲ ಕನ್ನಡಿ ಇವಳು.
ಇವಳೊಂದು ಪುಟ್ಟ ಕೊಳ,
ನನ್ನ ಬಾಳಿನ ಜೀವ ಜಲ.

ಬಿರು ಬಿಸಿಲಿಗೆ ಈಜಾಡಲು,
ಹೂ ತೋಟಕೆ ನೀರೂಡಲು,
ಮಕ್ಕಳು ಮರಿ ಚಿಕ್ಕ ದೋಣಿಯಲಿ ಕೂತು
ನಕ್ಕು ನಲಿಯುತ ವಿಹಾರ ಮಾಡಲು
ಸದಾ ಸಮೃದ್ಧ ಜಲ,
ಇವಳೊಂದು ಪುಟ್ಟ ಕೊಳ.

ಕರುಳ ಬಳ್ಳಿ ಒಡಲಲ್ಲಿ,
ಬಡಿದ ಕಲ್ಲು ತಳದಲ್ಲಿ,
ನರುಗಂಪು ಸೂಸಿ ನಗುವ ತಾವರೆ
ನೀರ ಮೇಲ್ಪದರದಲ್ಲಿ.
ಗಹನ, ಕಾಣಲು ಸರಳ,
ಇವಳೊಂದು ಪುಟ್ಟ ಕೊಳ.

                                      - ಬಿ. ಆರ್. ಲಕ್ಷ್ಮಣರಾವ್
ಅಮ್ಮ

ಅಮ್ಮ, ನಿನ್ನ ಎದೆಯಾಳದಲ್ಲಿ
ಗಾಳಕ್ಕೆ ಸಿಕ್ಕ ಮೀನು
ಮಿಡುಕಾಡುತಿರುವೆ ನಾನು
ಕಡಿಯಲೊಲ್ಲೆ ನೀ ಕರುಳಬಳ್ಳಿ
ಒಲವೂಡುತಿರುವ ತಾಯೆ,
ಬಿಡದ ಬುವಿಯ ಮಾಯೆ

ನಿನ್ನ ರಕ್ಷೆಗೂಡಲ್ಲಿ ಬೆಚ್ಚಗೆ
ಅಡಗಲಿ ಎಷ್ಟು ದಿನ?
ದೂಡು ಹೊರಗೆ ನನ್ನ
ಓಟ ಕಲಿವೆ, ಒಳನೋಟ ಕಲಿವೆ, ನಾ
ಕಲಿವೆ ಊರ್ಧ್ವ ಗಮನ,
ಓ ಅಗಾಧ ಗಗನ

ಮೇಲೆ ಹಾರಿ, ನಿನ್ನ ಸೆಳೆತ ಮೀರಿ,
ನಿರ್ಭಾರಸ್ಥಿತಿಗೆ ತಲುಪಿ
ಬ್ರಹ್ಮಾಂಡವನ್ನೇ ಬೆದಕಿ
ಇಂಧನ ತೀರಲು, ಬಂದೇ ಬರುವೆನು
ಮತ್ತೆ ನಿನ್ನ ತೊಡೆಗೆ,
ಮೂರ್ತ ಪ್ರೇಮದೆಡೆಗೆ

                                        - ಬಿ. ಆರ್. ಲಕ್ಷ್ಮಣರಾವ್

ಸುಬ್ಬಾಭಟ್ಟರ ಮಗಳೇ

ಸುಬ್ಬಾಭಟ್ಟರ ಮಗಳೇ,
ಇದೆಲ್ಲಾ ನಂದೆ ತಗೊಳ್ಳೇ

ನೀಲಿ ನೈಲೆಕ್ಸಿನ ಮೇಘ ವಿನ್ಯಾಸದ
ಆಕಾಶದ ಸೀರೆ
ದಿಗಂತಗಳೇ ಮೇರೆ
ಮುಂಜಾವಿನ ಬಂಗಾರದ ಬೆಟ್ಟ
ಬೆಳದಿಂಗಳ ಬೆಳ್ಳಿ
ನಿನ್ನ ಭಾಗ್ಯಕೆ ಎಣೆ ಎಲ್ಲಿ?

ರಾತ್ರಿ ತೆರೆಯುವುದು ಅದೂ ನನ್ನದೇ
ಜಿಗಿಜಿಗಿ ಒಡವೆ ದುಕಾನು:
ಆರಿಸಿಕೋ ಬೇಕೇನು
ಚಿಕ್ಕೆ ಮೂಗುತಿಗೆ, ಚಂದ್ರ ಪದಕಕ್ಕೆ
ನೀಹಾರಿಕೆ ಹಾರ
ನನ್ನ ಸಂಪತ್ತೆಷ್ಟು ಅಪಾರ!

ನಸುಕಲಿ ಹಿತ್ತಿಲ ಹುಲ್ಲಿನ ಮೇಲೆ
ರಾಶಿ ರಾಶಿ ಮುತ್ತು
ಇನ್ನು ನಿನ್ನ ಸೊತ್ತು
ಸುಗಂಧ ತೀಡುವ ವಸಂತ ಪವನ
ಸಪ್ತವರ್ಣದ ಕಮಾನು
ನಿನಗೇ ಅವೂನು

ಪಾತರಗಿತ್ತಿಯ ಪಕ್ಕವನೇರಿ
ಹೂ-ಪಡಖಾನೆಗೆ ಹಾರಿ
ಪ್ರಾಯದ ಮಧು ಹೀರಿ
ಜುಳು ಜುಳು ಹರಿಯುವ ಕಾಲದ ಹೊಳೆಯಲಿ
ತೇಲುವ ಮುಳುಮುಳುಗಿ
ದಿನ ಹೊಸತನದಲಿ ಬೆಳಗಿ

                                              - ಬಿ. ಆರ್. ಲಕ್ಷ್ಮಣರಾವ್