ಸೋಮವಾರ, ನವೆಂಬರ್ 12, 2012

'ಒಂದು ಜಿಲೇಬಿ' ಜೊತೆ..

ಆತ್ಮೀಯರೇ,

ಚಲನಚಿತ್ರ ಗೀತೆಗಳ ಮೂಲಕ ಬಹು ಜನಪ್ರಿಯರಾಗಿರುವ ಕವಿ, ಕಥೆಗಾರ  ಜಯಂತ ಕಾಯ್ಕಿಣಿಯವರು ಕನ್ನಡ ಕಾವ್ಯದಲ್ಲಿಯು ಸಹ ವಿಭಿನ್ನ ಛಾಪು ಮೂಡಿಸಿದ್ದಾರೆ. ಸದ್ಯಕ್ಕೆ ನಾನು ಅವರ 'ಒಂದು ಜಿಲೇಬಿ' ಕವಿತಾ ಸಂಗ್ರಹದ ಕವಿತೆಗಳಲ್ಲಿ ಕಳೆದುಹೋಗಿದ್ದೇನೆ.

 ಪ್ರತಿ ಕವಿತೆಯೂ ತುಟಿಯಲ್ಲಿ ಕಿರುನಗೆ ಮೂಡಿಸುವಂತೆ ಭಾಸವಾಗುತ್ತಲೇ ಮನದಾಳದಲ್ಲಿ ವಿಷಾದದಲೆಗಳನ್ನೆಬ್ಬಿಸುತ್ತದೆ...
'ರವಿ ಕಾಣದ್ದನ್ನು ಕವಿ ಕಾಣಬಲ್ಲ' ಎಂಬುದು ನಿರೂಪಿತವಾಗುವಂತೆ ಕಾಯ್ಕಿಣಿಯವರು ವಸ್ತು-ವ್ಯಕ್ತಿಗಳನ್ನು ಗಮನಿಸುವ ರೀತಿ  ಅದ್ಭುತವಾದುದು. ಅವರ ಕವಿತೆಗಳಲ್ಲಿನ ಹೋಲಿಕೆ, ಪ್ರತಿಮೆಗಳು ದಿನ ನಿತ್ಯ ನಾವು ಗಮನಿಸಿಯೂ ಗಮನಿಸದ ಎಷ್ಟೋ ಚಿತ್ರಗಳನ್ನು ಕಣ್ಣ ಮುಂದೆ ತರುತ್ತವೆ.ನವ್ಯ ಕಾವ್ಯದಂತೆ ವಾಚ್ಯವೆನ್ನಿಸುತ್ತಲೇ ರಮ್ಯ ಕಾವ್ಯವನ್ನೂ ನೆನೆಸುತ್ತವೆ. ಈ ಸಂಕಲನದ ಕೆಲವು ಕವಿತೆಗಳು ನಿಮಗಾಗಿ..

ಅಕ್ಕರೆಯಿಂದ,
ಕನಸು..
ಘಾಟ್ ಸೆಕ್ಶನ್ 

ರಪ್ ರಪ್ ಎಂದು ತಗಡಿನ ತಲೆಯ ಮೇಲೆ ಬಿರುಮಳೆ 
ಅಪ್ಪಳಿಸಿದಷ್ಟೂ ಉತ್ತೇಜಿತಗೊಂಡು ಬಸ್ಸು 
ಮೋಡಗಳ ಕಡಲಲ್ಲಿ ಇಳಿಯುತ್ತಿದೆ.

ಸುತ್ತಲೂ ಮುತ್ತಲೂ ನೀರದ ನೀರಾದ ಕತ್ತಲು 
ಕರಗುತಿವೆ ನವಿಲುಗಿರಿ ನೀರಿನಾಚೆ 
ನಿಟ್ಟುಸಿರು ನಸುನಿದ್ರೆ ಗುಟ್ಟು ಪೊಟ್ಟಣ ಚೀಲ 
ಎಲ್ಲ ಈಚೆಗಿವೆ 
ಭಗ್ನ ಎಚ್ಚರಗಳ ಭಂಗಿಯಲ್ಲಿ

ಹಗಲಲ್ಲೇ ಮಂಕುದೀಪ ಉರಿಸಿಕೊಂಡು 
ಅರೆ ತುಂಬಿದ ಬೆಳಕಿನ ಕೊಡದಂತೆ 
ತುಳುಕುತ್ತದೆ ಬಸ್ಸು 
ಗಕ್ಕೆಂದು ತಿರುವಿನಲ್ಲಿ ಅವಾಕ್ಕಾಗಿ

ಚಾಲಕನೊಬ್ಬನಿಗೇ ಗೊತ್ತಿದೆ ಎಲ್ಲ ಆಚೆಯದು 
ಅಂದುಕೊಂಡಿದ್ದೆವು ಈ ತನಕ 
ಆದರೆ ಅವನೆದುರೂ ಈಗೊಂದು ಭಯದ ಬತ್ತಲೆಗಾಜು 
ರಭಸದಿಂದ ಎರಗುವ ಅಪರಿಚಿತ ನೀರನ್ನು 
ಬದಿಗೆ ತಳ್ಳುತ್ತಲೇ ಇದೆ 
ನಿರಂತರ ಏಕಾಕಿ ಹೋರಾಟದಲ್ಲಿ 

                                      - ಜಯಂತ ಕಾಯ್ಕಿಣಿ 
                                        ' ಒಂದು ಜಿಲೇಬಿ '
ಕಣ್ಣಿನಲ್ಲಿ ಬಿದ್ದ ಜಗವೆ 

ಅರ್ಧ ಬರೆದ ಪತ್ರದಂತೆ ಎಲ್ಲಿ ಹೊರಟೆ ಹಾರಿ 
ಹೊಸ ಗಾಳಿಯ ಕೈಯಲ್ಲಿ ಹಸನಾಗುತ ಪೋರಿ 

ತೇರಿನಲ್ಲಿ ದೇವರಿಲ್ಲ ಕೇರಿಯಲ್ಲಿ ಜನರು
 ಕಾಗದದ ದೋಣಿಯಲ್ಲಿ ಮುದ್ದು ಮಳೆಯ ಕೆಸರು 

ಪೇಟೆಯಲ್ಲಿ ಅಂಗಡಿಗಳು ಕಣ್ತೆರೆಯುವ ಹೊತ್ತು 
ನಿನ್ನ ಮೂಕ ಸಣ್ಣಲೋಕ ಅವರಿಗೇನು ಗೊತ್ತು 

ಗುರ್ತಿನವರು ಕೇಳಿಯಾರು ಎಲ್ಲಿ ಹೊರಟೆ ಜೋರು 
ನಿಟ್ಟುಸಿರಲಿ ಉಕ್ಕುತಿರಲು ಒಲೆಯ ಮೇಲೆ ಮೀನು ಸಾರು 

ಏನಾಯಿತು ಕ್ಷಣದಿ ಎಲ್ಲ ಸ್ತಬ್ಧವಾಯಿತೆ 
ಕಣ್ಣಿನಲ್ಲಿ ಬಿದ್ದ ಜಗವೆ ಒದ್ದೆಯಾಯಿತೆ

ಏನೋ ಮರೆತೆ ಅನಿಸಿದರೆ ಬಂದು ಬಿಡೆ ಮನೆಗೆ 
ಹಿತ್ತಲಲ್ಲಿ ಒಣಗುತಿದೆ ನಿನ್ನ ಒಂಟಿ ಕಿರಿಗೆ 

ಇಂಥದೊಂದು ಸೆಳೆತದಲ್ಲಿ ಉಕ್ಕಿ ಬಂದರೇನೇ
ಚೊಕ್ಕವಾಗಿ ಹೊಳೆದೀತು ನಿನ್ನ ಬಿಸಿಲ ಕೋಣೆ

                                  - ಜಯಂತ ಕಾಯ್ಕಿಣಿ 
                                       ' ಒಂದು ಜಿಲೇಬಿ '
ಅಡ್ಡಮರ 

ದಾರಿಗಡ್ಡ ಬಂತೆಂದು ರಾತ್ರೋರಾತ್ರಿ ದುಡಿದು 
ಆ ಮರವನ್ನು ಚಕ್ಕೆ ಚಕ್ಕೆ ಉರುಳಿಸಿದರು 
ಈಗ ಬಿದ್ದುಕೊಂಡಲ್ಲೂ ಅಕ್ಕಪಕ್ಕ 
ಪಿಟ್ಟೆನದೆ ಒಡೆಯುತ್ತಿದೆ ಚಿಗುರು

ಕಡಿದಿದ್ದು ಗೊತ್ತೇ ಆಗಲಿಲ್ಲವೆ ಛೇ ಛೇಡಿಸಿವೆ ಹಕ್ಕಿ 
ಅಂತರಿಕ್ಷದಲ್ಲೆ ರೆಕ್ಕೆ ಬಡಿಯುತ್ತ ನಿಂತು 
ಒಂದಿಷ್ಟು ಶಾಲೆ ಮಕ್ಕಳು  ದಾರಿಯಲ್ಲಿ 
ಅದಕ್ಕಾತು ಅಭ್ಯಾಸ ನೋಡುತಿರುವರು

ರೋಮಾಂಚ ಕಳಕೊಂಡ ಕೊಂಬೆಯೊಂದ 
ಕದ್ದೊಯ್ಯುತ್ತಿದ್ದಾಳೆ ಗುಡಿಸಲ ಅಜ್ಜಿ 
ಸೌದೆ ಚೌಕಾಶಿ ಮುಗಿಸುತ್ತಿವೆ ಟೆಂಪೋ ಕೈಗಾಡಿ 
ಮಣ್ಣ ತೂತಿನಲ್ಲಿ ಕಣ್ಣ ಕಳಕೊಂಡಿದೆ ಬೇರು 

ಎಂದಿನದೋ ಮಳೆಯಗಂಧ ಮರದ ಗಾಯಕ್ಕೆ 
ಬೇರೆಯದೆ ತಿರುಳ ಬಣ್ಣ ತೆರೆದ ರಹದಾರಿಗೆ 
ಚಿಗುರೆಲೆಗಳ ಸುತ್ತಿ ಮಕ್ಕಳೂದುತ್ತಿರುವ 
ಇಂಪಾದ ಪೀಪಿಯಲ್ಲಿ ಎಂಥದೋ ಮೊರೆ  

                                           - ಜಯಂತ ಕಾಯ್ಕಿಣಿ 
                                            ' ಒಂದು ಜಿಲೇಬಿ '
ಅಡಿ ಟಿಪ್ಪಣಿ

ಕೊಳ : ರಸ್ತೆ ಬದಿ ಕೂತ ಮುದಿ 
ಸ್ವಾತಂತ್ರ್ಯ ಯೋಧನ ಕಣ್ಣು 

 ಮರ : ಬಿಟ್ಟಲ್ಲೇ ಲಡ್ದಾದ  ಬೋಳು 
ಬಾವುಟದ ಕೋಲು 

ಚಂದ್ರ : ಇರುವೆಗಳ ಮಧ್ಯೆ ಚಲಿಸುತಿರುವ 
ಸ್ತಬ್ಧ ಚೂರು ರೊಟ್ಟಿ 

 ಸೂರ್ಯ : ಬಟ್ಟೆ ತೊಟ್ಟಿಲಲ್ಲಿ ಹೊಳೆವ 
ಕೈಕೂಸಿನ ನೆತ್ತಿ 

ನದಿ : ಮನೆ ಬಿಟ್ಟೋಡಿದ  ಪೋರಿಯ 
ಏದುಸಿರಿನ ಜಾಡು

ಕಾಮನಬಿಲ್ಲು : ಕಾಮಾಟಿಪುರದಲಿ ಒಡೆವ 
ಬಳೆಗಳ ಚೂರು 

ಹಗಲು : ಬೇಕಾರ್ ಪೋರನ ಎದುರು
ಬಿದ್ದ ರದ್ದಿ ಪತ್ರಿಕೆ 

ಹಕ್ಕಿ : ಸಂತ್ರಸ್ತರಿಗೆಂದೇ  ಬಾಲ್ಕನಿಯಿಂದ 
ಎಸೆದ ಹಳೇ ಹರಕು ಬಟ್ಟೆ 

ರಾತ್ರಿ : ಹಳೆ ಗೆಳೆಯನ ಅರಸುತ್ತಾ 
ಅಲೆದು ಬಂದ ಬವಳಿ 

ಇಂಚರ : ಶಿವಕಾಶಿ ಪಟಾಕಿಯಲಿ ಸುತ್ತಿದ 
ಎಳೆ ಕಂಠಗಳ ಸುರುಳಿ 

ಕವಿತೆ : ಸ್ವಂತ ವಿಳಾಸ ಇಲ್ಲದವ 
ಬರೆಯದ ಪತ್ರದ ಸಾಲು 

ಬೆಳಗು : ಮೂಕನ ಅರೆ ಎಚ್ಚರದಲಿ 
ಕೇಳಿ ಬಂದ ಹಾಡು 

                                         - ಜಯಂತ ಕಾಯ್ಕಿಣಿ 
                                           ' ಒಂದು ಜಿಲೇಬಿ '

ಮಂಗಳವಾರ, ಮಾರ್ಚ್ 13, 2012

- -  ಗೆ

ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ
ನಿನ್ನೊಳಿದೆ  ನನ್ನ ಮನಸು.

ಹುಣ್ಣಿಮೆಯ ರಾತ್ರಿಯಲಿ ಉಕ್ಕುವುದು ಕಡಲಾಗಿ
ನಿನ್ನೊಲುಮೆ ನನ್ನ ಕಂಡು.

ಸಾಗರನ ಹೃದಯದಲಿ ರತ್ನಪರ್ವತ ಮಾಲೆ
ಮಿಂಚಿನಲಿ ಮೀವುದಂತೆ.

ತೀರದಲಿ ಬಳಕುವಲೆ ಕಣ್ಣ ಚುಂಬಿಸಿ ಮತ್ತೆ
ಸಾಗುವುದು ಕನಸಿನಂತೆ.

ಅಲೆ ಬಂದು ಕರೆಯುವುದು ನಿನ್ನೊಲುಮೆಯರಮನೆಗೆ
ಒಳಗಡಲ ರತ್ನಪುರಿಗೆ.

ಅಲೆಯಿಡುವ ಮುತ್ತಿನಲೆ ಕಾಣುವುದು ನಿನ್ನೊಲುಮೆ -
ಯೊಳಗುಡಿಯ ಮೂರ್ತಿಮಹಿಮೆ.

ನಿನ್ನ ಪ್ರೇಮದ ಪರಿಯ ನಾನರಿಯೆ, ಕನಕಾಂಗಿ
ತಾರೆಯಾಗದೆ ಕಾಣುವೀ ಮಿಂಚು, ನಾಳೆ, ಅರ್ಧಾಂಗಿ?

                                 - ಕೆ. ಎಸ್. ನರಸಿಂಹಸ್ವಾಮಿ
                                    ' ಮೈಸೂರು ಮಲ್ಲಿಗೆ '

ಮಂಗಳವಾರ, ಫೆಬ್ರವರಿ 21, 2012

ಹಳೆಯ ಹಾಡು

ಹಾಡು ಹಳೆಯದಾದರೇನು
ಭಾವ ನವನವೀನ
ಎದೆಯ ಭಾವ ಹೊಮ್ಮುವುದಕೆ
ಭಾಷೆ ಒಂದು ಸಾಧನ.

ಹಳೆಯ ಹಾಡ ಹಾಡು ಮತ್ತೆ
ಅದನೆ ಕೇಳಿ ತಣಿಯುವೆ
ಹಳೆಯ ಹಾಡಿನಿಂದ ಹೊಸತು
ಜೀವನವನೆ ಕಟ್ಟುವೆ.

ಹಾಡನೊಲಿದು ಕೇಳುವನಿತು
ತೆರೆದ ಹೃದಯ ನನಗಿದೆ
ಅಷ್ಟೆ ಸಾಕು; ಹಾಡು ನೀನು
ಅದನೆ ಕೇಳಿ ಸುಖಿಸುವೆ.

ಹಮ್ಮು ಬಿಮ್ಮು ಒಂದು ಇಲ್ಲ
ಹಾಡು, ಹೃದಯ ತೆರೆದಿದೆ
ಹಾಡಿನಲ್ಲಿ ಲೀನವಾಗ-
ಲೆನ್ನ ಮನವು ಕಾದಿದೆ.

                            - ಜಿ. ಎಸ್. ಶಿವರುದ್ರಪ್ಪ
                              'ಸಾಮಗಾನ'
ಕಾವ್ಯಕೆ ನಮನ

ಆ ಕನಸಿನ ಮೂರ್ತಿ
ನನಸಿನೊಳೂ ತಾನಾಯಿತು ಸ್ಫೂರ್ತಿ!

ಆ ಅಮೃತದ ಬಿಂದು
ಈ ಮೊಗ್ಗಿನ ಕಣ್ಗಳ ತೊಳೆದರಳಿಸಿತಿಂದು!

ಆ ಮಂದಾರದ ಗಂಧ
ಈ ಮರ್ತ್ಯದ ಹೂಗಿಳಿಯಿತು ತುಂಬಿ ಸುಗಂಧ!

ಆನಂದದ ಸಿಂಧು
ಬಂದಿಳಿದಾಯಿತು ಸೌಂದರ್ಯದ ಬಿಂದು!

ಮನ ಗೋಡೆಯ ಸುತ್ತು
ಒಡೆಯುತ ಹುಡಿಯಾಗುತ ಬಿತ್ತು!

ನಾ ಬಯಲಲಿ ನಿಂದೆ
ಹಿರಿಯರ ಎದೆಬಾಗಿಲ ಬಳಿ ಬಂದೆ

ನನ್ನವರಾದರು ಎಲ್ಲ
ಇದು ಬಲು ಅಚ್ಚರಿಗೊಳಿಸುವುದಲ್ಲ!

ಜಗದೊಲವಿನ ನಂಟತನ
ಲಭಿಸಿತು, ಅದಕಾಗಿಯೆ ಕಾವ್ಯಕೆ ನಮನ!

                                         - ಜಿ. ಎಸ್. ಶಿವರುದ್ರಪ್ಪ
                                            'ಚೆಲುವು-ಒಲವು'
ತೃಪ್ತಿ 

ಎದೆ ತುಂಬಿ ಹಾಡಿದೆನು ಅಂದು ನಾನು
ಮನವಿಟ್ಟು ಕೇಳಿದಿರಿ ಅಲ್ಲಿ ನೀವು
ಇಂದು ನಾ ಹಾಡಿದರು ಅಂದಿನಂತೆಯೆ ಕುಳಿತು
ಕೇಳುವಿರಿ ಸಾಕೆನಗೆ ಅದುವೆ ಬಹುಮಾನ
ಹಾಡುಹಕ್ಕಿಗೆ ಬೇಕೆ ಬಿರುದು ಸನ್ಮಾನ?

ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ,
ಹಾಡುವುದು ಅನಿವಾರ್ಯ ಕರ್ಮ ನನಗೆ
ಕೇಳುವವರಿಹರೆಂದು ನಾಬಲ್ಲೆನದರಿಂದ
ಹಾಡುವೆನು ಮೈದುಂಬಿ ಎಂದಿನಂತೆ
ಯಾರು ಕಿವಿ ಮುಚ್ಚಿದರು ನನಗಿಲ್ಲ ಚಿಂತೆ
                             
                                   - ಜಿ.ಎಸ್. ಶಿವರುದ್ರಪ್ಪ
                                      'ಸಾಮಗಾನ'

ಸೋಮವಾರ, ಫೆಬ್ರವರಿ 20, 2012

ಸ್ತ್ರೀ

ಆಕಾಶದ ನೀಲಿಯಲ್ಲಿ
ಚಂದ್ರ-ತಾರೆ ತೊಟ್ಟಿಲಲ್ಲಿ
ಬೆಳಕನಿಟ್ಟು ತೂಗಿದಾಕೆ -

ಹಸುರನುಟ್ಟ ಬೆಟ್ಟಗಳಲಿ
ಮೊಲೆಹಾಲಿನ ಹೊಳೆಯನಿಳಿಸಿ
ಬಯಲ ಹಸುರ ನಗಿಸಿದಾಕೆ -

ಮರ ಗಿಡ ಹೂ ಮುಂಗುರಳನು
ತಂಗಾಳಿಯ ಬೆರಳ ಸವರಿ
ಹಕ್ಕಿಗಿಲಕಿ ಹಿಡಿಸಿದಾಕೆ -

ಮನೆ ಮನೆಯಲಿ ದೀಪ ಮುಡಿಸಿ
ಹೊತ್ತು ಹೊತ್ತಿಗನ್ನವುಣಿಸಿ
ತಂದೆ-ಮಗುವ ತಬ್ಬಿದಾಕೆ -

ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಎಂದರೆ ಅಷ್ಟೇ ಸಾಕೆ?

                        - ಜಿ.ಎಸ್. ಶಿವರುದ್ರಪ್ಪ
                           ' ತೆರೆದ ದಾರಿ '
                                                                
ಅನ್ವೇಷಣೆ

ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ-ಸ್ನೇಹಗಳ
ಗುರುತಿಸದಾದೆನು ನಮ್ಮೊಳಗೆ.

ಎಲ್ಲಿದೆ ನಂದನ ಎಲ್ಲಿದೆ ಬಂಧನ
ಎಲ್ಲಾ ಇವೆ ಈ ನಮ್ಮೊಳಗೇ
ಒಳಗಿನ ತಿಳಿಯನು ಕಲಕದೆ ಇದ್ದರೆ
ಅಮೃತದ ಸವಿಯಿದೆ ನಾಲಗೆಗೆ.

ಹತ್ತಿರವಿದ್ದೂ ದೂರ ನಿಲ್ಲುವೆವು
ನಮ್ಮ ಅಹಮ್ಮಿನ ಕೋಟೆಯಲಿ
ಎಷ್ಟು ಕಷ್ಟವೋ ಹೊಂದಿಕೆ ಎಂಬುದು
ನಾಲ್ಕು ದಿನದ ಈ ಬದುಕಿನಲಿ!

                               - ಜಿ.ಎಸ್. ಶಿವರುದ್ರಪ್ಪ
                                 'ಗೋಡೆ'

ಬೆಸುಗೆ


ಮುಂಗಾರಿನ.ಅಭಿಷೇಕಕೆ
ಮಿದುವಾಯಿತು ನೆಲವು
ಧಗೆ ಆರಿದ ಹೃದಯದಲ್ಲಿ
ಪುಟಿದೆದ್ದಿತು ಚೆಲುವು.

ಬಾಯಾರಿದ ಬಯಕೆಗಳಲಿ
ಥಳಥಳಿಸುವ ನೀರು
ಕಣ್ಣಿಗೆ ತಣ್ಣಗೆ ಮುತ್ತಿಡುತಿದೆ
ಪ್ರೀತಿಯಂಥ ಹಸಿರು.

ಮೈಮನಗಳ ಕೊಂಬೆಯಲ್ಲಿ
ಹೊಮ್ಮುವ ದನಿಯಿಂಪು
ನಾಳೆಗೆ ನನಸಾಗುವ ಕನಸಿನ
ಹೂವರಳುವ ಕಂಪು.

ಭರವಸೆಗಳ ಹೊಲಗಳಲ್ಲಿ
ನೇಗಿಲ - ಗೆರೆ ಕವನ
ಶ್ರಾವಣದಲಿ ತೆನೆದೂಗುವ
ಜೀವೋತ್ಸವ ಗಾನ.

                         - ಜಿ.ಎಸ್. ಶಿವರುದ್ರಪ್ಪ
                       'ಚಕ್ರಗತಿ'

ಶನಿವಾರ, ಫೆಬ್ರವರಿ 18, 2012

ನೆಲದ ಕರೆ

ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ
ನಾಲ್ಕು ಹನಿಯ ಚೆಲ್ಲಿ
ದಿನ ದಿನವು ಕಾದು ಬಾಯಾರಿ ಬೆಂದೆ
ಬೆಂಗದಿರ ತಾಪದಲ್ಲಿ.

ನನ್ನೆದೆಯ ಹಸಿರ ಉಸಿರು ಕುಗ್ಗಿದರು
ಬರಲಿಲ್ಲ ನಿಮಗೆ ಕರುಣ
ನನ್ನ ಹೃದಯದಲಿ ನೋವು ಮಿಡಿಯುತಿದೆ
ನಾನು ನಿಮಗೆ ಶರಣ.

ಬಡವಾದ ನನ್ನ ಒಡಲುರಿಯ ಬೇಗೆ
ನಿಮಗರಿವು ಆಗಲಹುದೆ?
ನೀಲಗಗನದಲ್ಲಿ ತೇಲಿಹೋಗುತಿಹ
ನಿಮ್ಮನೆಳೆಯಬಹುದೆ?

ಬಾಯುಂಟು ನನಗೆ, ಕೂಗಬಲ್ಲೆ ನಾ
ನಿಮ್ಮೆದೆಯ ಪ್ರೇಮವನ್ನು
ನೀವು ಕರುಣಿಸಲು ನನ್ನ ಹಸಿರೆದೆಯು
ಉಸಿರುವುದು ತೋಷವನ್ನು.

ಓ ಬನ್ನಿ ಬನ್ನಿ, ಓ ಬನ್ನಿ ಬನ್ನಿ,
ನನ್ನೆದೆಗೆ ತಂಪ ತನ್ನಿ
ನೊಂದ ಜೀವರಿಗೆ ತಂಪನೀಯುವುದೆ
ಪರಮಪೂಜೆಯೆನ್ನಿ!

                                        - ಜಿ. ಎಸ್. ಶಿವರುದ್ರಪ್ಪ
                                         'ಸಾಮಗಾನ'

ಬುಧವಾರ, ಫೆಬ್ರವರಿ 15, 2012

ಪ್ರೀತಿ ಇಲ್ಲದ ಮೇಲೆ

ಪ್ರೀತಿ ಇಲ್ಲದ ಮೇಲೆ -
ಹೂವು ಅರಳೀತು ಹೇಗೆ?
ಮೋಡ ಕಟ್ಟೀತು ಹೇಗೆ?
ಹನಿಯೊಡೆದು ಕೆಳಗಿಳಿದು
ನೆಲಕ್ಕೆ ಹಸಿರು ಮೂಡೀತು ಹೇಗೆ?

ಪ್ರೀತಿ ಇಲ್ಲದ ಮೇಲೆ -
ಮಾತಿಗೆ ಮಾತು ಕೂಡೀತು ಹೇಗೆ?
ಅರ್ಥ ಹುಟ್ಟೀತು ಹೇಗೆ?
ಬರೀ ಪದಕ್ಕೆ ಪದ ಜತೆಗಿದ್ದ ಮಾತ್ರಕ್ಕೆ
ಪದ್ಯವಾದೀತು ಹೇಗೆ?

ಪ್ರೀತಿ ಇಲ್ಲದ ಮೇಲೆ -
ದಕ್ಷಿಣಾಫ್ರಿಕದ ಕಗ್ಗತ್ತಲಿಗೆ
ಬೆಳಕು ಮೂಡೀತು ಹೇಗೆ?
ಸೆರೆಮನೆಯ ಕಂಬಿಯ ನಡುವೆ
ಕಮರುವ ಕನಸು ಕೊನರೀತು ಹೇಗೆ?
ಬಿಳಿ ಜನರ ಕರಾಳ ಕಪ್ಪು ಹೃದಯಕ್ಕೆ
ಕ್ರಿಸ್ತನ ಕರುಣೆ ಅರ್ಥವಾದೀತು ಹೇಗೆ?

ಪ್ರೀತಿ ಇಲ್ಲದ ಮೇಲೆ -
ಸಂಶಯದ ಗಡಿಗಳುದ್ದಕ್ಕು
ಸಿಡಿಗುಂಡುಗಳ ಕದನ ನಿಂತೀತು ಹೇಗೆ?
ಜಾತಿ-ಮತ-ಭಾಷೆ-ಬಣ್ಣಗಳ ಗೋಡೆಯ ನಡುವೆ
ನರಳುವ ಪಾಡು ತಪ್ಪೀತು ಹೇಗೆ?
ನಮ್ಮ ನಿಮ್ಮ ಮನಸ್ಸು
ಮರುಭೂಮಿಯಾಗದ ಹಾಗೆ
ತಡೆಗಟ್ಟುವುದು ಹೇಗೆ?

                         - ಜಿ. ಎಸ್. ಶಿವರುದ್ರಪ್ಪ
                         'ಪ್ರೀತಿ ಇಲ್ಲದ ಮೇಲೆ'
ಬನ್ನಿ ನನ್ನ ಹೃದಯಕೆ 

ದೀಪವಿರದ ದಾರಿಯಲ್ಲಿ
ತಡವರಿಸುವ ನುಡಿಗಳೇ
ಕಂಬನಿಗಳ ತಲಾತಲದಿ
ನಂದುತಿರುವ ಕಿಡಿಗಳೇ
ಉಸಿರನಿಡುವೆ   
ಹೆಸರ ಕೊಡುವೆ
ಬನ್ನಿ ನನ್ನ ಹೃದಯಕೆ.

ನೀಲಿಯಲ್ಲಿ ಮೈಯಿಲ್ಲದೆ
ತೇಲಾಡುವ ಹನಿಗಳೇ
ಬಾಯಿಲ್ಲದ ಮೌನದಲ್ಲಿ
ಅಲೆಯುತಿರುವ ದನಿಗಳೇ
ಉಸಿರನಿಡುವೆ
ಹೆಸರ ಕೊಡುವೆ
ಬನ್ನಿ ನನ್ನ ಹೃದಯಕೆ.

ಜಲವಿಲ್ಲದ ನೆಲಗಳಲ್ಲಿ
ಕಮರುತಿರುವ ಕುಡಿಗಳೇ
ಬಿರುಬಿಸಿಲಿನ ತುಳಿತದಲ್ಲಿ
ಸೊರಗಿ ಹೋದ ಮಿಡಿಗಳೇ
ಉಸಿರನಿಡುವೆ 
ಹೆಸರ ಕೊಡುವೆ
ಬನ್ನಿ ನನ್ನ ಹೃದಯಕೆ.

ಶ್ರುತಿಯಿಲ್ಲದ ವಾದ್ಯದಲ್ಲಿ
ಗತಿಯಿಲ್ಲದ ಸ್ವರಗಳೇ
ಬಿರುಗಾಳಿಗೆ ಗರಿಯುದುರಿದ
ಹೊಂಗನಸಿನ ಮರಿಗಳೇ
ಉಸಿರನಿಡುವೆ
ಹೆಸರ ಕೊಡುವೆ
ಬನ್ನಿ ನನ್ನ ಹೃದಯಕೆ.

                        - ಜಿ. ಎಸ್. ಶಿವರುದ್ರಪ್ಪ
                           'ಪ್ರೀತಿ ಇಲ್ಲದ ಮೇಲೆ'




ಬುಧವಾರ, ಫೆಬ್ರವರಿ 1, 2012

ಶ್ರುತಿ ಮೀರಿದ ಹಾಡು 

ಶ್ರುತಿ ಮೀರಿದ ಹಾಡು
ಪ್ರೇಮ ಸುಳಿವ ಜಾಡು

ಅಂದು ಕನಸಿನರಸ
ಇಂದು ಏನೋ ವಿರಸ
ಹಳಸಿತೆ ಆ ಒಲವು?
ತಳೆಯಿತೆ ಈ ನಿಲುವು?

ಯಾರಿವಳೀ ಹುಡುಗಿ?
ಹೊಸ ಹರೆಯದ ಬೆಡಗಿ
ಸಾವಿನ ನಾಡಿನೊಳು
ಜೀವರಸದ ಹೊನಲು

ಮಗುವಿನ ನಗೆಯವನು
ಮಿಡಿಯುವ ಬಗೆಯವನು
ಬಾಗಿಲ ಬಡಿಯುವನು
ಇಂದು ಯಾರೊ ಇವನು!

ತೆರೆಗಳ ಮೊರೆತದಲಿ
ಆಳದ ಮೌನದಲಿ
ಹೊರಳು ದಾರಿಗಳಲಿ
ನನ್ನ ಮೂಕ ಅಳಲು

                               - ಬಿ. ಆರ್. ಲಕ್ಷ್ಮಣರಾವ್
ನಿಂಬೆ ಗಿಡ

ನಾ ಚಿಕ್ಕವನಾಗಿದ್ದ ಅಪ್ಪ ಹೇಳುತ್ತಿದ್ದರು;
ಈ ನಿಂಬೆಯ ಗಿಡದಿಂದೊಂದು ಒಳ್ಳೆಯ ಪಾಠವ ಕಲಿ ಮಗು;
ನೀ ಪ್ರೇಮದಲ್ಲಿ ಎಂದೂ ನಂಬಿಕೆ ಇಡಬೇಡ, ಮರಿ
ಆ ಪ್ರೇಮವೂ ಸಹ ನಿಂಬೆಯ ಗಿಡದಂತೆಂಬುದ ನೀ ತಿಳಿ

ನಿಂಬೆಗಿಡ ತುಂಬಾ ಚೆಂದ, ನಿಂಬೆಯ ಹೂವು ತುಂಬಾ ಸಿಹಿ
ಆದರೆ ನಿಂಬೆಯ ಹಣ್ಣೊ, ಕಂದ, ತಿನ್ನಲು ಬಹಳ ಹುಳಿ, ಕಹಿ

ಯೌವನದಲ್ಲಿ ನಾನೂ ಒಂದು ಹುಡುಗಿಯ ಪ್ರೇಮಿಸಿದೆ
ಈ ಹುಡುಗಿಯು ನನಗೆ ಊಡಿಸುತ್ತಿದ್ದಳು ದಿನವೂ ಪ್ರೇಮ ಸುಧೆ
ಸೂರ್ಯನತ್ತಲೇ ಸೂರ್ಯಕಾಂತಿ ಮೊಗವೆತ್ತಿ ತಿರುಗುವಂತೆ
ಆ ಹುಡುಗಿಯ ಮೋಹದಲ್ಲಿ ಅಪ್ಪನ ಮಾತ ನಾ ಮರೆತೆ;
                                                    IIನಿಂಬೆಗಿಡ ತುಂಬಾ ಚೆಂದII

ನಿಂಬೆಯ ಗಿಡದ ರೆಂಬೆ ರೆಂಬೆಯಲೂ ನೂರು ನೂರು ಮುಳ್ಳು;
ಹುಡುಗಿಯ ಪ್ರೇಮದ ಮಾತುಗಳೆಲ್ಲ ಶುದ್ಧ ಕಪಟ ಸುಳ್ಳು;
ಬೇರೊಬ್ಬನ ಕೊಬ್ಬಿಗೆ ಶಾಖವಾಗಿಹಳು ನನ್ನ ಹುಡುಗಿಯಿಂದು
ಅಪ್ಪನ ಕಿರುನಗೆ ರೇಗಿಸುತ್ತಿದೆ, ಬುದ್ಧಿ ಬಂತೆ? ಎಂದು
                                                   IIನಿಂಬೆಗಿಡ ತುಂಬಾ ಚೆಂದII

                                                      - ಬಿ. ಆರ್. ಲಕ್ಷ್ಮಣರಾವ್
                                                        (ಸ್ಫೂರ್ತಿ: ' ಲೆಮನ್ ಟ್ರೀ' ಎಂಬ ಇಂಗ್ಲಿಷ್ ಹಾಡು)

ಮನಸೇ

ಮನಸೇ, ನನ್ನ ಮನಸೇ
ಏನಾಗಿದೆ ನಿನಗೆ?
ಏಕೆ ಅವಳ ಕಹಿ ನೆನಪೇ
ಜೇನಾಗಿದೆ ನಿನಗೆ?

ಬೇಡವೆಂದರೂ ಏಕೆ ತರುವೆ
ಕಣ್ಮುಂದೆ ಅವಳ ಚಿತ್ರ?
ಬೂಟಾಟಿಕೆ, ಆ ನಾಟಕ
ಅವಳ ವಿವಿಧ ಪಾತ್ರ

ಪದೇ ಪದೇ ಮತ್ತದೇ ಜಾಗಕ್ಕೆ
ನನ್ನ ಸೆಳೆವೆಯೇಕೆ?
ಕಂಡು ಮರುಗಲು ಕುಸಿದ ಅರಮನೆ
ಉರುಳಿದ ಪ್ರೇಮಪತಾಕೆ

ಮಣ್ಣಾಗಿದೆ ನನ್ನ ಪ್ರೀತಿ
ಹೃದಯದ ಗೋರಿಯಲ್ಲಿ
ಗೋರಿಯನ್ನೇಕೆ ಬಗೆಯುವೆ
ಮೋಹದ ಹಾರೆಯಲ್ಲಿ?

                                   - ಬಿ. ಆರ್. ಲಕ್ಷ್ಮಣರಾವ್

ನೀನಿಲ್ಲದಿರುವಾಗ

ನೀನಿಲ್ಲದಿರುವಾಗ, ನಲ್ಲ
ಒಬ್ಬಂಟಿ ನಾನು ಮನೆಯಲ್ಲಿ
ಮೂಡುವುದು ಚಿತ್ರ ಮನದಲ್ಲಿ :

ಭೋರ್ಗರೆದು ಮೊರೆಯುವುದು ಕಡಲು
ನೊರೆಗರೆದು ಕುದಿವ ಅಲೆಗಳು
ಮೇರೆಯರಿಯದ ಪ್ರೀತಿ ನಿನ್ನಲ್ಲಿ ನನಗೆ
ಅದಕೆಂದೆ ಕಡಲೆನ್ನ ಮನ ತುಂಬಿದೆ

ಏರು ಪರ್ವತ ಸಾಲು ಸಾಲು
ಹಿಮ ಕವಿದ ನುಣುಪು ಶಿಖರಗಳು
ಎಷ್ಟು ಎತ್ತರ ನನ್ನ ಪ್ರೀತಿ ನಿನ್ನಲ್ಲಿ!
ಅದಕೆಂದೆ ಪರ್ವತದ ಚಿತ್ರ ಮನದಲ್ಲಿ

ನನ್ನ ಪ್ರೀತಿಗೆ ಅಲೆಯ ಆತಂಕ ನೀಡಿರುವ
ಸಾಗರವೇ, ನಿನಗೆ ವಂದನೆ!
ನನ್ನ ಪ್ರೀತಿಗೆ ನಿನ್ನ ಶಿಖರ ಸೌಮ್ಯತೆ ಕೊಟ್ಟ
ಪರ್ವತವೆ, ನಿನ್ನ ಮರೆವೆನೆ?

                                         - ಬಿ. ಆರ್. ಲಕ್ಷ್ಮಣರಾವ್

ಗುರುವಾರ, ಜನವರಿ 19, 2012

ಮತ್ತಷ್ಟು ಕವನಗಳೊಂದಿಗೆ..


ಕಾವ್ಯ ಪ್ರೇಮಿಗಳೇ,

     ಮನಸಿನ ಅರ್ಥವಿಲ್ಲದ ಅಸಹನೆ, ಕಾರಣವಿಲ್ಲದ ಜಡತ್ವಕ್ಕೆ ಕಾರಣ ಹುಡುಕುತ್ತಿರುವಾಗ ನನಗೆ ಇತ್ತೀಚಿನ ಪುಸ್ತಕ ಮೇಳವೊಂದರಲ್ಲಿ ಉತ್ತರ ದೊರೆಯಿತು. ಕುವೆಂಪು, ಜಿ.ಎಸ್. ಶಿವರುದ್ರಪ್ಪ, ಬಿ.ಆರ್. ಲಕ್ಷ್ಮಣರಾವ್ ಮುಂತಾದವರ ಕವನ ಸಂಕಲನಗಳು ಕಣ್ಣಿಗೆ ಬಿದ್ದಾಗ ಇಷ್ಟು ದಿನ  ಕಳೆದುಕೊಂಡಿದ್ದೇನೆಂಬುದರ ಅರಿವಾಯ್ತು ..

    'ಕಣಜ'ದಲ್ಲಿ ಹೊಸ ಕವಿತೆಗಳನ್ನು ತುಂಬದೆ, ಯಾಂತ್ರಿಕ ಜೀವನದಲ್ಲಿ ಮುಳುಗಿದ್ದ ನಾನು ಮತ್ತೆ ಕಾವ್ಯ ಪ್ರಪಂಚಕ್ಕೆ ಹಿಂದಿರುಗಿದ್ದೇನೆ. 'ಎಲ್ಲಿ ಹೋದಿರಿ?, 'ಕವನಗಳನ್ನು ಪ್ರಕಟಿಸಿ' ಎಂಬೆಲ್ಲ ಸಂದೇಶಗಳ ಮೂಲಕ ನೀವು ತೋರಿದ ಅಕ್ಕರೆಗೆ ಧನ್ಯವಾದ ಹೇಳುತ್ತ, ಇಷ್ಟು ದಿನ ನಿಮ್ಮನ್ನು ಕಾಯಿಸಿದ ತಪ್ಪಿಗೆ ಕ್ಷಮೆ ಕೇಳುತ್ತ, ಮತ್ತಷ್ಟು ಕವಿತೆಗಳು ನಿಮಗಾಗಿ..


    ಅಕ್ಕರೆಯಿಂದ,
    ಕನಸು..
ನಿನ್ನಿಂದ

ಜೀವ ಬಂದಂತೆ
ಸವಿಭಾವ ಬಂದಂತೆ
ಇನಿಯಾ, ನೀ ಬಂದೆ
ನೀ ಬಂದೆ ನನ್ನ ಬಾಳಿಗೆ

ನಿನ್ನ ನೋಟವೆ ಚುಂಬಕ
ನಿನ್ನ ನಗೆಯೋ ಮೋಹಕ
ನಾ ಸೋತೆ, ಶರಣಾದೆ
ನಿನ್ನ ಸ್ಪರ್ಶಕೆ
ಮಿಂಚು ಹರಿದಂತೆ
ನನ್ನ ಧಮನಿ ಧಮನಿಯಲಿ
ಘಲ್ಲೆಂದು ಈ ಮೊಗ್ಗರಳಿ
ಹೂವಾಯಿತು

ಬಂತು ಹೂವಿಗೆ ಪರಿಮಳ
ಬಣ್ಣದೋಕುಳಿ ದಳದಳ
ಈ ಅಂದ ಮಕರಂದ
ಎಲ್ಲಾ ನಿನ್ನಿಂದ
ಪ್ರೀತಿ ನೀನೆರೆದೆ
ನನ್ನ ಬಾಳ ಬೇರಿಗೆ
ಈ ಹೂವು ಕಾಯಾಗಿ
ಹಣ್ಣಾಯಿತು

                                   - ಬಿ. ಆರ್. ಲಕ್ಷ್ಮಣರಾವ್
ಪುಟ್ಟ ಕೊಳ

ನನ್ನವಳು, ಈ ನನ್ನಾಕೆ
ಹರಿಯುವ ನದಿಯಲ್ಲ,
ಸರಿವ ಸರಿತೆಯಲ್ಲ,
ಇವಳೊಂದು ಪುಟ್ಟಕೊಳ,
ನನ್ನ ಬಾಳಿನ ಜೀವ ಜಲ.

ಹರಿಯುವ ನದಿಯಲ್ಲ,
ಒಳಸುಳಿಗಳ ಭಯವಿಲ್ಲ,
ಕಾಣದ ಕಡಲಿನ ಕರೆಗೆ ಓಗೊಟ್ಟು
ತೊರೆದುಹೊಗುವಂಥ ತೊರೆಯಲ್ಲ,
ಇವಳೊಂದು ಪುಟ್ಟ ಕೊಳ,
ನನ್ನ ಬಾಳಿನ ಜೀವ ಜಲ.

ಹಗಲು ರವಿ, ಬೆಟ್ಟ, ಮುಗಿಲು,
ಚಿಕ್ಕೆ, ಚಂದಿರನ ಇರುಳು
ಮುಕ್ಕಾಗದಂತೆ ಪ್ರತಿಬಿಂಬಿಸುವ
ನಿರ್ಮಲ ಕನ್ನಡಿ ಇವಳು.
ಇವಳೊಂದು ಪುಟ್ಟ ಕೊಳ,
ನನ್ನ ಬಾಳಿನ ಜೀವ ಜಲ.

ಬಿರು ಬಿಸಿಲಿಗೆ ಈಜಾಡಲು,
ಹೂ ತೋಟಕೆ ನೀರೂಡಲು,
ಮಕ್ಕಳು ಮರಿ ಚಿಕ್ಕ ದೋಣಿಯಲಿ ಕೂತು
ನಕ್ಕು ನಲಿಯುತ ವಿಹಾರ ಮಾಡಲು
ಸದಾ ಸಮೃದ್ಧ ಜಲ,
ಇವಳೊಂದು ಪುಟ್ಟ ಕೊಳ.

ಕರುಳ ಬಳ್ಳಿ ಒಡಲಲ್ಲಿ,
ಬಡಿದ ಕಲ್ಲು ತಳದಲ್ಲಿ,
ನರುಗಂಪು ಸೂಸಿ ನಗುವ ತಾವರೆ
ನೀರ ಮೇಲ್ಪದರದಲ್ಲಿ.
ಗಹನ, ಕಾಣಲು ಸರಳ,
ಇವಳೊಂದು ಪುಟ್ಟ ಕೊಳ.

                                      - ಬಿ. ಆರ್. ಲಕ್ಷ್ಮಣರಾವ್
ಅಮ್ಮ

ಅಮ್ಮ, ನಿನ್ನ ಎದೆಯಾಳದಲ್ಲಿ
ಗಾಳಕ್ಕೆ ಸಿಕ್ಕ ಮೀನು
ಮಿಡುಕಾಡುತಿರುವೆ ನಾನು
ಕಡಿಯಲೊಲ್ಲೆ ನೀ ಕರುಳಬಳ್ಳಿ
ಒಲವೂಡುತಿರುವ ತಾಯೆ,
ಬಿಡದ ಬುವಿಯ ಮಾಯೆ

ನಿನ್ನ ರಕ್ಷೆಗೂಡಲ್ಲಿ ಬೆಚ್ಚಗೆ
ಅಡಗಲಿ ಎಷ್ಟು ದಿನ?
ದೂಡು ಹೊರಗೆ ನನ್ನ
ಓಟ ಕಲಿವೆ, ಒಳನೋಟ ಕಲಿವೆ, ನಾ
ಕಲಿವೆ ಊರ್ಧ್ವ ಗಮನ,
ಓ ಅಗಾಧ ಗಗನ

ಮೇಲೆ ಹಾರಿ, ನಿನ್ನ ಸೆಳೆತ ಮೀರಿ,
ನಿರ್ಭಾರಸ್ಥಿತಿಗೆ ತಲುಪಿ
ಬ್ರಹ್ಮಾಂಡವನ್ನೇ ಬೆದಕಿ
ಇಂಧನ ತೀರಲು, ಬಂದೇ ಬರುವೆನು
ಮತ್ತೆ ನಿನ್ನ ತೊಡೆಗೆ,
ಮೂರ್ತ ಪ್ರೇಮದೆಡೆಗೆ

                                        - ಬಿ. ಆರ್. ಲಕ್ಷ್ಮಣರಾವ್

ಸುಬ್ಬಾಭಟ್ಟರ ಮಗಳೇ

ಸುಬ್ಬಾಭಟ್ಟರ ಮಗಳೇ,
ಇದೆಲ್ಲಾ ನಂದೆ ತಗೊಳ್ಳೇ

ನೀಲಿ ನೈಲೆಕ್ಸಿನ ಮೇಘ ವಿನ್ಯಾಸದ
ಆಕಾಶದ ಸೀರೆ
ದಿಗಂತಗಳೇ ಮೇರೆ
ಮುಂಜಾವಿನ ಬಂಗಾರದ ಬೆಟ್ಟ
ಬೆಳದಿಂಗಳ ಬೆಳ್ಳಿ
ನಿನ್ನ ಭಾಗ್ಯಕೆ ಎಣೆ ಎಲ್ಲಿ?

ರಾತ್ರಿ ತೆರೆಯುವುದು ಅದೂ ನನ್ನದೇ
ಜಿಗಿಜಿಗಿ ಒಡವೆ ದುಕಾನು:
ಆರಿಸಿಕೋ ಬೇಕೇನು
ಚಿಕ್ಕೆ ಮೂಗುತಿಗೆ, ಚಂದ್ರ ಪದಕಕ್ಕೆ
ನೀಹಾರಿಕೆ ಹಾರ
ನನ್ನ ಸಂಪತ್ತೆಷ್ಟು ಅಪಾರ!

ನಸುಕಲಿ ಹಿತ್ತಿಲ ಹುಲ್ಲಿನ ಮೇಲೆ
ರಾಶಿ ರಾಶಿ ಮುತ್ತು
ಇನ್ನು ನಿನ್ನ ಸೊತ್ತು
ಸುಗಂಧ ತೀಡುವ ವಸಂತ ಪವನ
ಸಪ್ತವರ್ಣದ ಕಮಾನು
ನಿನಗೇ ಅವೂನು

ಪಾತರಗಿತ್ತಿಯ ಪಕ್ಕವನೇರಿ
ಹೂ-ಪಡಖಾನೆಗೆ ಹಾರಿ
ಪ್ರಾಯದ ಮಧು ಹೀರಿ
ಜುಳು ಜುಳು ಹರಿಯುವ ಕಾಲದ ಹೊಳೆಯಲಿ
ತೇಲುವ ಮುಳುಮುಳುಗಿ
ದಿನ ಹೊಸತನದಲಿ ಬೆಳಗಿ

                                              - ಬಿ. ಆರ್. ಲಕ್ಷ್ಮಣರಾವ್