ಶುಕ್ರವಾರ, ಜನವರಿ 14, 2011

ಇಂದಿನ ಸಂಕ್ರಾಂತಿ

ಬಳಲಿದ ಬಾಳಿಗೆ ಭರವಸೆಯಾಗಲಿ
ಇಂದಿನ ಸಂಕ್ರಾಂತಿ
ಒಣಗಿದ ಹಾಳೆಗೆ ಹೊಸ ಮಳೆ ಸುರಿಯಲಿ
ಮೂಡಲಿ ಶುಭಶಾಂತಿ

ದಿಕ್ಕುಗಳೆಲ್ಲವು ಪ್ರಸನ್ನವಾಗಲಿ
ಬೀಸಲಿ ತಂಗಾಳಿ
ಬತ್ತಿದ ನದಿಗಳ ಪಾತ್ರವು ತುಂಬಲಿ
ಗಂಗೆಯೆ ಮೈತಾಳಿ
ತೂಗುತಿರಲಿ ಹೊಲಗದ್ದೆಗಳು
ತೆನೆಯ ಹಾರವಾಗಿ
ಹಣ್ಣು ತುಂಬಿ ಮರ ನಗುತಿರಲಿ
ಬಣ್ಣದ ತೇರಾಗಿ!

ಬಾ ಸಂಕ್ರಾಂತಿಯೇ ವರವಾಗಿ
ಜೀವಸ್ವರವಾಗಿ
ಸೋತ ದೇಹಗಳು ಚೇತನವ
ತುಂಬಲು ನೆರವಾಗಿ
ಬಡವರ ದೀನರ ಬಾಳಿನಲಿ
ತೃಪ್ತಿಯ ನಗೆಯಾಗಿ
ನನಸಾಗುವ ಹೊಸ ಕನಸುಗಳ
ಬಿತ್ತುವ ಕರವಾಗಿ

                                                       - ಡಾll ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ

ಕಾಮೆಂಟ್‌ಗಳಿಲ್ಲ: