ಸೋಮವಾರ, ಡಿಸೆಂಬರ್ 27, 2010

ಬೆಳಗಿನ ತೋಟದಲ್ಲಿ

ಬಳ್ಳಿಯ ಬೆರಳಲಿ ಹೂವೊಂದಿತ್ತು
ಉಂಗುರವಿಟ್ಟಂತೆ.
ಹೂವಿನ ತುಟಿಯಲಿ ಹನಿಯೊಂದಿತ್ತು
ಮುತ್ತೊಂದಿಟ್ಟಂತೆ.

ನೀರಿನ ಹನಿಯೇ ಕಾಮನಬಿಲ್ಲಿನ
ಕಂಬನಿಯಾಗಿತ್ತು.
ಹೂವಿನ ಸುತ್ತಾ ಹರಡಿಹ ಹುಲ್ಲಿನ
ಹಸುರಿನ ಹಾಸಿತ್ತು.

ಹನಿಗಳ ಹಿಡಿಯುತ ಕುಡಿಯುತ ಕೋಗಿಲೆ
ಬಾಯನು ತೆರೆದಿತ್ತು.
ಬಳ್ಳಿಯ ಹೂವಿನ ಬೆಳ್ಳಿಯ ಬಾಗಿಲೆ
ಹಾಡಿಗೆ ತೆರೆದಿತ್ತು,

ಭೂಮಿಯ ಉದಯದ ಭವ್ಯಾನಂದದ
ಹೊಸಗಾಳಿ
ಮೊದಲಿನ ಮಕ್ಕಳ ತೊದಲಿನ ಕೇಕೆಯ
ಉಂಗುರ ದನಿಗಳಲಿ

ಕರೆದಿದೆ: 'ನೋವೇ ಇಲ್ಲದ ಊರಿಗೆ
ಎಲ್ಲಾ ಬರಬಹುದು.'
ಕನಸಿನ ಹಸುವಿನ ಹಾಲೂ ಮಧುರವೆ?
- ಹಾಗೂ ಇರಬಹುದು.

                                 - ಕೆ.ಎಸ್. ನರಸಿಂಹಸ್ವಾಮಿ
                                    ' ಇರುವಂತಿಗೆ '

ಕಾಮೆಂಟ್‌ಗಳಿಲ್ಲ: